ಬಿ. ಸರೋಜಾದೇವಿ
ಇನ್ಸ್ಟಾಗ್ರಾಂ ಚಿತ್ರ
ವಬೆಂಗಳೂರು: ಅಭಿನಯ ಸರಸ್ವತಿ, ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಹೀಗೆ ಹಲವು ಉಪನಾಮಗಳಿಂದ ಕರೆಯಿಸಿಕೊಂಡಿದ್ದ ಕನ್ನಡದ ಮೊದಲ ಸೂಪರ್ಸ್ಟಾರ್ ಅಭಿನೇತ್ರಿ ಬಿ.ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸುವ ಮೂಲಕ ಭಾರತೀಯ ನಟಿಯಾದವರು.
ಚತುರ್ಭಾಷಾ ತಾರೆಯಾಗಿ ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಅವರು ಕಿತ್ತೂರು ಚೆನ್ನಮ್ಮರಾಗಿ ಹೂಂಕರಿಸಿದ್ದರು. ಬಭ್ರುವಾಹನದಲ್ಲಿ ಚಿತ್ರಾಂಗದೆಯಾಗಿ ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದರು. ಜತೆಗೆ ಭಾರತ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಎಂದೆನಿಸಿಕೊಂಡವರು.
17ನೇ ವಯಸ್ಸಿನಲ್ಲೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂದೂ ಕರೆದರು. ಸರೋಜಾದೇವಿ ಅವರು ತಮ್ಮ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (1955) ಮೂಲಕ ದೊಡ್ಡ ಅವಕಾಶ ಪಡೆದರು. ಪಾಂಡುರಂಗ ಮಹಾತ್ಯಂ (1957) ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1970ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (1958) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1967ರಲ್ಲಿ ಅವರ ಮದುವೆಯ ನಂತರ, ಅವರು 1974ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಮುಂದುವರೆದರು.
1958ರಿಂದ 1980ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮುಂದುವರೆದರು. ಪೈಘಮ್ (1959) ದಿಂದ ಪ್ರಾರಂಭಿಸಿ 1960ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು.
1955ರಿಂದ 1984ರ ನಡುವಿನ 29ವರ್ಷಗಳಲ್ಲಿ ಸತತ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸರೋಜಾ ದೇವಿಯವರು 1969ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ, ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದರು.
ಸರೋಜಾದೇವಿ ಅವರು ಬೆಂಗಳೂರು, ಮೈಸೂರು ಸಾಮ್ರಾಜ್ಯದಲ್ಲಿ (ಈಗಿನ ಬೆಂಗಳೂರು, ಕರ್ನಾಟಕ) 1938ರ ಜ. 7ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು. ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ. ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಈ ದಂಪತಿಯ ನಾಲ್ಕನೇ ಮಗಳಾಗಿ ಸರೋಜಾದೇವಿ ಜನಿಸಿದರು.
ಸರೋಜಾದೇವಿ ನೃತ್ಯ ಕಲಿಯುವುದು ತಂದೆ ಭೈರಪ್ಪ ಅವರ ಒತ್ತಾಸೆಯೂ ಆಗಿತ್ತು. ಜತೆಗೆ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಯುವತಿಯಾದ ಸರೋಜಾದೇವಿ ಅವರು ತಂದೆ ಸ್ಟುಡಿಯೋಗಳಿಗೆ ಆಗಾಗ್ಗೆ ಜೊತೆಯಾಗುತ್ತಿದ್ದರು. ಈಜುಡುಗೆಗಳು ಮತ್ತು ತೋಳಿಲ್ಲದ ಬ್ಲೌಸ್ ತೊಡುವಂತಿಲ್ಲ ಎಂಬಿತ್ಯಾದಿ ಕಟ್ಟುನಿಟ್ಟಾದ ಡ್ರೆಸ್ಕೋಡ್ ಅನ್ನು ತಾಯಿ ಹೇರಿದ್ದರು. ಇದನ್ನೇ ತಮ್ಮ ವೃತ್ತಿಜೀವನದ ಉಳಿದ ಅವಧಿಗೂ ಅನುಸರಿಸಿದರು. 13ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಸರೋಜಾದೇವಿ ಹಾಡುತ್ತಿದ್ದಾಗ, ಅದನ್ನ ಕಂಡು ಬಿ.ಆರ್. ಕೃಷ್ಣಮೂರ್ತಿಯವರು ಚಿತ್ರದ ಪ್ರಸ್ತಾಪ ಮಾಡಿದ್ದಾಗ, ಸರೋಜಾದೇವಿ ಅವರು ಅದನ್ನು ನಿರಾಕರಿಸಿದ್ದರು.
ಕನ್ನಡದಲ್ಲಿ ಡಾ. ರಾಜ್ಕುಮಾರ್, ಕಲ್ಯಾಣ್ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದ ಸರೋಜಾದೇವಿ, ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರಿಗೂ ತೆರೆಮೇಲೆ ಜತೆಯಾದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ 22 ಹಿಟ್ ಚಿತ್ರಗಳಲ್ಲಿ, ಎಂ.ಜಿ. ರಾಮಚಂದ್ರನ್ ಜೊತೆ 26 ಹಿಟ್ ಚಿತ್ರಗಳಲ್ಲಿ ನಟಿಸಿದರು. ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್ದತ್ ಜೊತೆ ನಟಿಸಿದ ಸರೋಜಾದೇವಿ, ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿ.
ಕಿತ್ತೂರುರಾಣಿ ಚೆನ್ನಮ್ಮ
ಅಮರಶಿಲ್ಪಿ ಜಕಣಾಚಾರಿ
ಕಥಾಸಾಗರ
ಬಬ್ರುವಾಹನ
ಭಾಗ್ಯವಂತರು
ಆಷಾಡಭೂತಿ
ಶ್ರೀರಾಮಪೂಜಾ
ಕಚ ದೇವಯಾನಿ
ರತ್ನಗಿರಿ ರಹಸ್ಯ
ಕೋಕಿಲವಾಣಿ
ಸ್ಕೂಲ್ಮಾಸ್ಟರ್
ಪಂಚರತ್ನ
ಲಕ್ಷ್ಮೀಸರಸ್ವತಿ
ಚಿಂತಾಮಣಿ
ಭೂಕೈಲಾಸ
ಅಣ್ಣತಂಗಿ
ಜಗಜ್ಯೋತಿ ಬಸವೇಶ್ವರ
ಕಿತ್ತೂರುಚೆನ್ನಮ್ಮ
ದೇವಸುಂದರಿ
ವಿಜಯನಗರದ ವೀರಪುತ್ರ
ಮಲ್ಲಮ್ಮನ ಪವಾಡ
ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ
ಪೂರ್ಣಿಮಾ
ಗೃಹಿಣಿ
ಪಾಪಪುಣ್ಯ
ಸಹಧರ್ಮಿಣಿ
ಶ್ರೀನಿವಾಸಕಲ್ಯಾಣ
ಚಾಮುಂಡೇಶ್ವರಿ ಮಹಿಮೆ
ಚಿರಂಜೀವಿ
ಶನಿಪ್ರಭಾವ
ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
2008ರಲ್ಲಿ ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜೀವಮಾನ ಸಾಧನೆಗಾಗಿ ಸರೋಜಾದೇವಿ ಅವರಿಗೆ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
1992ರಲ್ಲಿ ಪದ್ಮಭೂಷಣ, 1969ರಲ್ಲಿ ಪದ್ಮಶ್ರೀ ಪಡೆದಿದ್ದಾರೆ. 2009ರಲ್ಲಿ ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ’ ಜೀವಮಾನ ಸಾಧನೆ ಪ್ರಶಸ್ತಿ, 2009 ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, 2009- ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ ಹಾಗೂ 2024ರಲ್ಲಿ ಪ್ರಜಾವಾಣಿ ಸಿನಿ ಸಮ್ಮಾನದ 2ನೇ ಆವೃತ್ತಿಯ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ.
2001 - ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
1993 - ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
1988 - ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
1980 - ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
1969 - ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
1965 - ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ
'ಇತರ ಪ್ರಶಸ್ತಿಗಳು'
2009 - ನಾಟ್ಯ ಕಲಾಧರ್ ಪ್ರಶಸ್ತಿ— ತಮಿಳು ಸಿನಿಮಾ, ಭರತ್ ಕಲಾಚಾರ್ ಚೆನ್ನೈ
2007 - ಕರ್ನಾಟಕ ತೆಲುಗು ಅಕಾಡೆಮಿಯಿಂದ ಗಮನಾರ್ಹ ಸಾಧನೆಗಾಗಿ NTR ಪ್ರಶಸ್ತಿ
2007 - ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಫ್ ಚೆನ್ನೈನಿಂದ ರೋಟರಿ ಶಿವಾಜಿ ಪ್ರಶಸ್ತಿ
2006 - ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
2006 - ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಜಯ್ ಪ್ರಶಸ್ತಿ
2003 - ಸರ್ವಾಂಗೀಣ ಸಾಧನೆಗಾಗಿ ದಿನಕರನ್ ಪ್ರಶಸ್ತಿ
1997 - ಚೆನ್ನೈನಲ್ಲಿ ಸಿನಿಮಾ ಎಕ್ಸ್ಪ್ರೆಸ್ನಿಂದ ಜೀವಮಾನ ಸಾಧನೆ ಪ್ರಶಸ್ತಿಗಳು
1994 - ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ
2010ರಲ್ಲಿ ಭಾರತೀಯ ವಿದ್ಯಾ ಭವನ 'ಪದ್ಮಭೂಷಣ ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ', ಪ್ರತಿ ವರ್ಷ ಪ್ರದರ್ಶನ ಕಲೆಯ ಕಲಾವಿದರನ್ನು ಗೌರವಿಸುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಥಾಪಿಸಿತು. ಕೆ.ಜೆ.ಯೇಸುದಾಸ್, ವೈಜಯಂತಿಮಾಲಾ, ಅಂಜಲಿದೇವಿ, ಅಂಬರೀಶ್, ಜಯಂತಿ ಮತ್ತಿತರರು ಈ ಪ್ರಶಸ್ತಿಯನ್ನು ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.