ADVERTISEMENT

ಮಕ್ಕಳಲ್ಲಿ ಅಡಿನಾಯ್ಡ್‌ ಹೆಚ್ಚಳ : ಇದರ ಲಕ್ಷಣ,ಪರಿಹಾರ ಕ್ರಮದ ಮಾಹಿತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:33 IST
Last Updated 10 ಫೆಬ್ರುವರಿ 2026, 7:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಕ್ಕಳ ಆರೋಗ್ಯದ ಮೇಲೆ ಪೋಷಕರು ಎಷ್ಟು ನಿಗಾ ವಹಿಸಿದರೂ ಸಾಲದು. ಸ್ವಲ್ಪ ಎಚ್ಚರ ತಪ್ಪಿದರೂ ಪುಟ್ಟ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಹವಾಮಾನ , ಆಹಾರ ಪದ್ಧತಿ ಬದಲಾವಣೆ ಆಗುತ್ತಿದ್ದಂತೆ ಮಕ್ಕಳ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ.

ಪದೇ ಪದೇ ಜ್ವರ, ಮೂಗು ಕಟ್ಟಿಕೊಳ್ಳುವುದು, ನೆಗಡಿ ಪುಟ್ಟ ಮಕ್ಕಳನ್ನು ಸಾಮಾನ್ಯವಾಗಿ ಕಾಡುತ್ತವೆ. ಇದು ಅಡಿನಾಯ್ಡ್ ಹೆಚ್ಚಳ ಆಗಿರಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.

ADVERTISEMENT

ಏನಿದು ಅಡಿನಾಯ್ಡ್ ಹೆಚ್ಚಳ, ಈ ಸಮಸ್ಯೆಗೆ ಕಾರಣ, ಲಕ್ಷಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರಾದ ಡಾ. ಪೂರ್ಣಿಮಾ ಎನ್. ಅವರು  'ಪ್ರಜಾವಾಣಿ ಡಿಜಿಟಲ್'ಗೆ ಮಾಹಿತಿ ನೀಡಿದ್ದಾರೆ.

ಏನಿದು ಅಡಿನಾಯ್ಡ್ ಹೆಚ್ಚಳ.?

ಅಡಿನಾಯ್ಡ್‌ಗಳು ಮೂಗಿನ ಹಿಂಭಾಗ ಮತ್ತು ಗಂಟಲಿನ ಮೇಲ್ಭಾಗದಲ್ಲಿರುವ ರಕ್ಷಣಾ ವ್ಯವಸ್ಥೆಯ ಭಾಗವಾಗಿದೆ. ಮಕ್ಕಳಲ್ಲಿ ಕಫ ಹೆಚ್ಚಾದಂತೆ ಅಡಿನಾಯ್ಡ್ ಗ್ರಂಥಿಯ ಗಾತ್ರ ಹೆಚ್ಚಾಗುತ್ತದೆ. ಇದರಿಂದಾಗಿ ಮಕ್ಕಳಲ್ಲಿ ನಿದ್ದೆ, ಉಸಿರಾಟದ ತೊಂದರೆ, ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

ಪ್ರಾತಿನಿಧಿಕ ಚಿತ್ರ

ಎಷ್ಟು ವಯಸ್ಸಿನ ಮಕ್ಕಳಿಗೆ ಈ ಸಮಸ್ಯೆ ಕಾಡುತ್ತದೆ.?

ಅಡಿನಾಯ್ಡ್ ಹೆಚ್ಚಳ ಸಾಮಾನ್ಯವಾಗಿ 3 ರಿಂದ 6 ವರ್ಷದ ವಯಸ್ಸಿನೊಳಗೆ ಕಂಡುಬರುತ್ತದೆ. ಮಗು ಬೆಳವಣಿಗೆ ಹೊಂದುತ್ತಿದ್ದಂತೆ ಸುಮಾರು 8 ರಿಂದ 10 ವರ್ಷದ ವೇಳೆಗೆ ಹೆಚ್ಚಾದ ಅಡಿನಾಯ್ಡ್ ನಿಧಾನವಾಗಿ ಕುಗ್ಗುತ್ತದೆ. ಮಕ್ಕಳು ಪ್ರೌಢಾವಸ್ಥೆಗೆ ಬರುವ ಹೊತ್ತಿಗೆ ಹೆಚ್ಚಾದ ಅಡಿನಾಯ್ಡ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲ ಮಕ್ಕಳಿಗೂ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

ಲಕ್ಷಣಗಳು

ಬಾಯಿಂದ ಉಸಿರಾಟ: ಆರೋಗ್ಯಕರ ಮಗು ಮೂಗಿನ ಮೂಲಕ ಉಸಿರಾಡುತ್ತದೆ. ಆದರೆ ಅಡಿನಾಯ್ಡ್ ಊತದಿಂದ ಮೂಗಿನ ಒಳಗಿನ ಮಾರ್ಗದಲ್ಲಿ ಅಡ್ಡಿ ಉಂಟಾದಾಗ ಮಗು ಬಾಯಿಂದ ಉಸಿರಾಡಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಮಕ್ಕಳು ಬಾಯಿ ತೆರೆದ ಸ್ಥಿತಿಯಲ್ಲೇ ಕಾಣಿಸಿಕೊಳ್ಳುತ್ತಾರೆ. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ತುಟಿ, ಬಾಯಿಯ ಒಳಭಾಗದಲ್ಲಿ ಒಣಗುವಿಕೆ ಮತ್ತು ಕೆಲವೊಮ್ಮೆ ಬಾಯಿ ದುರ್ವಾಸನೆಗೂ ಕಾರಣವಾಗುತ್ತದೆ.  

ಗೊರಕೆ ಹೊಡೆಯುವುದು: ಮಕ್ಕಳು ಮಲಗಿದಾಗ ಗೊರಕೆ ಹೊಡೆಯುವುದು ಅಡಿನಾಯ್ಡ್ ಹೆಚ್ಚಳದ ಪ್ರಮುಖ ಲಕ್ಷಣವಾಗಿದೆ. ನಿದ್ದೆಯ ಸಮಯದಲ್ಲಿ ಉಸಿರಾಟದ ಮಾರ್ಗದಲ್ಲಿ ಅಡ್ಡಿ ಉಂಟಾದಾಗ ಗಾಳಿಯ ಹರಿವು ಸರಿಯಾಗಿ ನಡೆಯದೆ ಶಬ್ದ ಉಂಟಾಗುತ್ತದೆ. ಕೆಲ ಮಕ್ಕಳಲ್ಲಿ ಆ ವೇಳೆ ಗೊರಕೆ ಶಬ್ದ ಕೇಳಿಬರುತ್ತದೆ. ಮಧ್ಯೆ ಮಧ್ಯೆ ಉಸಿರಾಟ ಕ್ಷಣಿಕವಾಗಿ ನಿಲ್ಲುವಂತೆಯೂ ಕಾಣಿಸುತ್ತದೆ. 

ನಿದ್ದೆಯ ತೊಂದರೆ: ಈ ಸಮಸ್ಯೆಯ ಮತ್ತೊಂದು ಗಂಭೀರ ಪರಿಣಾಮ ನಿದ್ದೆಗೆ ತೊಂದರೆ. ಅತಿಯಾಗಿ ಬೆವರುವುದರಿಂದ ನಿದ್ದೆಗೆ ಅಡ್ಡಿಯಾಗಬಹುದು. ಮಕ್ಕಳು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ ಕೊರತೆ, ಓದುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕಿವಿನೋವು: ಅಡಿನಾಯ್ಡ್ ಸಮಸ್ಯೆಯಿರುವ ಮಕ್ಕಳು ಮೂಗಿನ ಧ್ವನಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸಲು ತೊಂದರೆಯಾಗಬಹುದು. ಕಿವಿನೋವು ಅಥವಾ ಕಿವಿ ಸೋಂಕುಗಳು ಕಾಣಿಸಿಕೊಳ್ಳಬಹುದು. ಅಡಿನಾಯ್ಡ್ ಊತದಿಂದ ಮೂಗು, ಗಂಟಲು ಮತ್ತು ಕಿವಿಯನ್ನು ಸಂಪರ್ಕಿಸುವ ಒಳಗಿನ ಮಾರ್ಗದಲ್ಲಿ ಅಡ್ಡಿ ಉಂಟಾದಾಗ ಕಿವಿಯಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರಿಂದ ಶಬ್ಧ ಕೇಳದಿರಬಹದು. ಕಿವಿ ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಆಹಾರ ಸೇವನೆಗೆ ಅಡ್ಡಿ: ಆಹಾರವನ್ನು ನಿಧಾನವಾಗಿ ತಿನ್ನುವುದು, ಊಟ ಮಾಡಲು ಆಸಕ್ತಿ ತೋರದಿರುವ ಲಕ್ಷಣಗಳು ಕಂಡುಬರುತ್ತವೆ. ಇದರಿಂದಾಗಿ ಮಕ್ಕಳ ತೂಕ ಮತ್ತು ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. 

ಅಡಿನಾಯ್ಡ್ ಮುಖ: ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಮುಖದ ಆಕಾರದಲ್ಲಿಯೂ ಬದಲಾವಣೆ ಕಾಣಿಸಬಹುದು. ಇದನ್ನು ‘ಅಡಿನಾಯ್ಡ್ ಮುಖ‘ ಎಂದು ಕರೆಯಲಾಗುತ್ತದೆ. ಇದರಲ್ಲಿ ಮುಖ ಉದ್ದವಾದಂತೆ, ಮುಖಭಾವ ಮಂದವಾಗುವುದು, ಬಾಯಿ ಸದಾ ತೆರೆದಿರುವುದು ಮತ್ತು ಮೇಲಿನ ಹಲ್ಲುಗಳು ಎದ್ದು ಕಾಣಿಸುವುದು. ಹಲ್ಲುಗಳ ಅಸಮರ್ಪಕ ಜೋಡಣೆ. ಇದು ಸಾಮಾನ್ಯವಾಗಿ ದೀರ್ಘಕಾಲ ಬಾಯಿಂದ ಉಸಿರಾಟ ಮಾಡುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಾತಿನಿಧಿಕ ಚಿತ್ರ

ಅಡಿನಾಯ್ಡ್ ಹೆಚ್ಚಳ ನಿಯಂತ್ರಣಕ್ಕೆ ಇಲ್ಲಿವೆ ಮನೆಮದ್ದುಗಳು

ಅಡಿನಾಯ್ಡ್ ಸಮಸ್ಯೆಯನ್ನು ‘ಕಂಠ ಶಾಲೂಕ’ ಎಂಬ ಸ್ಥಿತಿಗೆ ಹೋಲಿಸಿ ವಿವರಿಸಲಾಗಿದೆ. ಗಂಟಲು ಭಾಗದಲ್ಲಿ ಕಫ ಹೆಚ್ಚಾಗಿ ಉಸಿರಾಟದ ಮಾರ್ಗದಲ್ಲಿ ಅಡ್ಡಿ ಉಂಟಾಗುವ ಸ್ಥಿತಿಯೇ ಇದರ ಮೂಲ. ಮಕ್ಕಳಲ್ಲಿ ಸಹಜವಾಗಿ ಹೆಚ್ಚಿರುವ ಕಫ, ದುರ್ಬಲ ಜೀರ್ಣಶಕ್ತಿ ಮತ್ತು ಮರುಕಳಿಸುವ ಸೋಂಕುಗಳಿಗೆ ದೇಹ ನೀಡುವ ಪ್ರತಿಕ್ರಿಯೆಯೇ ಈ ಸಮಸ್ಯೆಗೆ ಕಾರಣವಾಗುತ್ತದೆ.

ಗರ್ಗ್ಲಿಂಗ್:  ಪ್ರತಿದಿನ ಬೆಳಿಗ್ಗೆ ಸ್ವಲ್ಪ ಬಿಸಿ ನೀರನ್ನು ಮಕ್ಕಳ ಬಾಯಲ್ಲಿ ಹಾಕಿ ಗರ್ಗ್ಲಿಂಗ್ ಮಾಡಿಸಬೇಕು. ಹೀಗೆ ಮಾಡುವುದರಿಂದ ಬಾಯಿ ಮತ್ತು ಗಂಟಲು ಭಾಗ ಶುದ್ಧವಾಗುತ್ತದೆ.

ತ್ರಿಫಲ ಕಷಾಯ: ವಾರದಲ್ಲಿ ಮೂರು ಬಾರಿ ತ್ರಿಫಲ‌ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಕಫವನ್ನು ನಿಯಂತ್ರಿಸಬಹುದು.

ವ್ಯಾಯಾಮ: ಮಕ್ಕಳನ್ನು ಹೊರಗಡೆ ಆಟ, ನಿಧಾನ ಓಟ, ಸರಳ ವ್ಯಾಯಾಮದಲ್ಲಿ ತೊಡಗಿಸುವುದರಿಂದ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡಬಹುದು. 

ಕುದಿಸಿದ ಹಾಲಿಗೆ ಅರಿಸಿನ ಸೇರಿಸಿ ಕುಡಿಸುವುದು: ಅರಿಸಿನದಲ್ಲಿರುವ ಔಷಧ ಗುಣಗಳು ದೇಹದಲ್ಲಿನ ಅತಿಯಾದ ಕಫವನ್ನು ಸಮತೋಲನಕ್ಕೆ ತಂದು ಗಂಟಲು ಭಾಗದಲ್ಲಿರುವ ಊತವನ್ನು ಕಡಿಮೆ ಮಾಡುತ್ತದೆ. ಮಕ್ಕಳನ್ನು ರಾತ್ರಿ ಮಲಗಿಸುವ ಮುನ್ನ, ಕುದಿಸಿದ ಹಾಲಿಗೆ ಚಿಟಿಕೆಯಷ್ಟು ಅರಿಸಿನ ಸೇರಿಸಿ ಕುಡಿಸುವುದರಿಂದ ಕಫವನ್ನು ನಿಯಂತ್ರಿಸಿ ಗಂಟಲು ಭಾಗದಲ್ಲಿರುವ ಊತವನ್ನು ಕಡಿಮೆ ಮಾಡುತ್ತದೆ. 

ಅಮೃತಬಳ್ಳಿ ಕಷಾಯ: ಅಮೃತಬಳ್ಳಿಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪ್ರಮುಖ ಆಯುರ್ವೇದ ಔಷಧವಾಗಿದೆ. ಈ ಬಳ್ಳಿಯ ಕಷಾಯ ಮಾಡಿ ಕುಡಿಸುವುದರಿಂದ  ಮಕ್ಕಳನ್ನು ಸೋಂಕಿನಿಂದ ರಕ್ಷಿಸಿ  ದೇಹವನ್ನು ಒಳಗಿನಿಂದ ಬಲಪಡಿಸಿ, ಅಡಿನಾಯ್ಡ್ ಸಮಸ್ಯೆ ಉಲ್ಬಣಗೊಳ್ಳದಂತೆ ತಡೆಯಲು ಸಹಾಯಕವಾಗುತ್ತದೆ. ಈ ಕಷಾಯವನ್ನು ವೈದ್ಯರ ಸಲಹೆಯೊಂದಿಗೆ ನಿಯಮಿತವಾಗಿ ಬಳಸಬೇಕು. 

ಆಹಾರ ಕ್ರಮ: ಆಹಾರದಲ್ಲಿಯೂ ಎಚ್ಚರ ಅಗತ್ಯ. ತಂಪು ಪಾನೀಯಗಳು, ಐಸ್‌ಕ್ರೀಂ, ಬಿಸ್ಕೆಟ್, ಬೇಕರಿ ಪದಾರ್ಥಗಳು, ಮೊಸರು ಇವುಗಳನ್ನು ಹೆಚ್ಚು ನೀಡದೆ,  ತಾಜಾ, ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು, ತರಕಾರಿ ಸೂಪ್ ಗಳನ್ನು ಮಕ್ಕಳಿಗೆ ನೀಡಬೇಕು.

ಜೀವನ ಶೈಲಿ:  ಫ್ಯಾನ್ ಅಥವಾ ಎಸಿಗಳ ನೇರ ಗಾಳಿ ಮಕ್ಕಳ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು.‌‌ 

ಅಡಿನಾಯ್ಡ್ ಹೆಚ್ಚಳ ಸಮಸ್ಯೆ ಚಿಕ್ಕದಾಗಿ ಕಾಣಿಸಿಕೊಂಡರೂ ಆರಂಭದಲ್ಲೇ ಚಿಕಿತ್ಸೆ ಕೊಡಿಸುವುದರಿಂದ ಮಕ್ಕಳ ಉತ್ತಮ ಬೆಳವಣಿಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಮಾಹಿತಿ: ಡಾ. ಪೂರ್ಣಿಮಾ ಎನ್, ಸಹ ಪ್ರಾಧ್ಯಾಪಕಿ, ಕೌಮಾರಭೃತ್ಯ ವಿಭಾಗ (ಆಯುರ್ವೇದ ಮಕ್ಕಳ ರೋಗ ತಜ್ಞರು) ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ

ಡಾ. ಪೂರ್ಣಿಮಾ. ಎನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.