ADVERTISEMENT

ಅಹಮದಾಬಾದ್‌ನಲ್ಲಿ ವಿಮಾನ ಪತನ: ಇದೇ ಮೊದಲಲ್ಲ, 1988ರಲ್ಲಿ 133 ಜನ ಮೃತಪಟ್ಟಿದ್ದರು

ಶಮಿನ್‌ ಜಾಯ್‌
Published 12 ಜೂನ್ 2025, 14:20 IST
Last Updated 12 ಜೂನ್ 2025, 14:20 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಪತನ</p></div>

ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಪತನ

   

ಪಿಟಿಐ ಚಿತ್ರ

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. 37 ವರ್ಷಗಳ ಹಿಂದೆ ಮುಂಬೈನಿಂದ ಪ್ರಯಾಣ ಆರಂಭಿಸಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವು, ಗುಜರಾತ್‌ ರಾಜಧಾನಿ (ಗಾಂಧೀ ನಗರ) ವಿಮಾನ ನಿಲ್ದಾಣದ ಸಮೀಪ ಪತನಗೊಂಡಿತ್ತು. ಸಿಬ್ಬಂದಿ ಸೇರಿದಂತೆ ಅದರಲ್ಲಿದ್ದ 135 ಜನರ ಪೈಕಿ 133 ಮಂದಿ ಮೃತಪಟ್ಟಿದ್ದರು.

ADVERTISEMENT

VT-EAH ನೋಂದಾಯಿತ ಹಾಗೂ 17 ವರ್ಷ ಕಾರ್ಯಾಚರಣೆ ನಡೆಸಿದ್ದ ಬೋಯಿಂಗ್‌ 737–200 ವಿಮಾನವು, ಮುಂಬೈನಿಂದ ಅಹಮದಾಬಾದ್‌ಗೆ 1988ರ ಅಕ್ಟೋಬರ್‌ 19ರಂದು ಬೆಳಿಗ್ಗೆ 5.45ಕ್ಕೆ ಹೊರಡಬೇಕಿತ್ತು. ಆದರೆ, ಪ್ರಯಾಣಿಕರೊಬ್ಬರು ಬರುವುದು ತಡವಾದ ಕಾರಣ ನಿಗದಿಗಿಂತ 20 ನಿಮಿಷ ವಿಳಂಬವಾಗಿ ಅಂದರೆ ಬೆಳಿಗ್ಗೆ 6.05ಕ್ಕೆ ಪ್ರಯಾಣ ಆರಂಭಿಸಿತ್ತು.

ಅಹಮದಾಬಾದ್‌ ನಿಲ್ದಾಣದ ಸಮೀಪ ಪೈಲಟ್‌ ನಿಯಂತ್ರಣ ಕಳೆದುಕೊಂಡಿದ್ದ ಆ ವಿಮಾನ, ಬೆಳಿಗ್ಗೆ 6.53ರ ಸುಮಾರಿಗೆ ಮರಗಳು ಹಾಗೂ ಹೈ–ಟೆನ್ಷನ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿತ್ತು. ನಂತರ ಅಹಮದಾಬಾದ್‌ಗೆ ಹತ್ತಿರದ ಚಿಲೋಡಾ ಕೋಟರ್‌ಪುರ ಗ್ರಾಮದ ಹೊರವಲಯದಲ್ಲಿ ಬಿದ್ದಿತ್ತು. ಘಟನಾ ಸ್ಥಳವು ರನ್‌ವೇನಿಂದ ಕೇವಲ 2.5 ಕಿ.ಮೀ ದೂರದಲ್ಲಿತ್ತು.

127 ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. ಗುಜರಾತ್‌ ವಿದ್ಯಾಪೀಠದ ನಿವೃತ್ತ ಉಪ ಕುಲಪತಿ ವಿನೋದ್‌ ತ್ರಿಪಾಠಿ ಹಾಗೂ ಉದ್ಯಮಿ ಅಶೋಕ್‌ ಅಗರವಾಲ್‌ ಅವರಷ್ಟೇ ಬದುಕುಳಿದಿದ್ದರು. ಕಾಲಾನಂತರದಲ್ಲಿ ತ್ರಿಪಾಠಿ ಅವರು ಸಹಜವಾಗಿ ಸಾವಿಗೀಡಾದರೆ, ಅಗರವಾಲ್‌ ಅವರ ಶವ ಅಹಮದಾಬಾದ್‌ನಲ್ಲಿರುವ ಅವರ ಫ್ಲಾಟ್‌ನಲ್ಲಿ 2020ರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಗರವಾಲ್‌ ಸಾವಿನಲ್ಲಿ ಯಾರ ಕೈವಾಡವೂ ಇಲ್ಲ ಎಂದು ಪೊಲೀಸರು ಖಚಿತಪಡಿಸಿದ್ದರು.

ಮಾಧ್ಯಮದವರೊಂದಿಗೆ ಸಂವಾದದಲ್ಲಿ ಮಾತನಾಡಿದ್ದ ಅಗರವಾಲ್‌, ಮಗಳ ಹುಟ್ಟುಹಬ್ಬದ ಶಾಪಿಂಗ್‌ ಸಲುವಾಗಿ ಪತ್ನಿ ಹಾಗೂ 11 ತಿಂಗಳ ಮಗಳೊಂದಿಗೆ ಮುಂಬೈಗೆ ಹೋಗಿದ್ದೆ. ವಾಪಸ್‌ ಬರುವಾಗ ಅಪಘಾತವಾಗಿತ್ತು ಎಂದು ಹೇಳಿಕೊಂಡಿದ್ದರು. ಅವರ ಹೆಂಡತಿ ಮತ್ತು ಮಗು ದುರಂತದಲ್ಲಿ ಮೃತಪಟ್ಟಿದ್ದರು. ಅಗರವಾಲ್‌ ಅವರು 40 ದಿನ ಪ್ರಜ್ಞಾಹೀನರಾಗಿದ್ದರು. ಸ್ಮರಣಶಕ್ತಿಯನ್ನೂ ಕಳೆದುಕೊಂಡು ನಂತರ ಚೇತರಿಸಿಕೊಂಡಿದ್ದರು.

ಈ ದುರಂತವು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ.

ಸೌದಿ ಅರೇಬಿಯನ್‌ ಏರ್‌ಲೈನ್ಸ್‌ ಹಾಗೂ ಕಜಖಸ್ತಾನ್‌ ಏರ್‌ಲೈನ್ಸ್‌ ವಿಮಾನಗಳು ಹರಿಯಾಣದ ಚಾರ್ಕಿ ದಾದ್ರಿ ಸಮೀಪ 1996ರ ನವೆಂಬರ್‌ನಲ್ಲಿ ಆಕಾಶದಲ್ಲೇ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದವು. ಈ ವೇಳೆ ಎರಡೂ ವಿಮಾನಗಳಲ್ಲಿದ್ದ 349 ಮಂದಿ ಸಾವಿಗೀಡಾಗಿದ್ದರು.

ದೇಶದಲ್ಲಿ ಸಂಭವಿಸಿದ ಇತರ ವಿಮಾನ ಅಪಘಾತಗಳ ಪೈಕಿ 1978ರ ಜನವರಿಯಲ್ಲಿ ಬಾಂದ್ರಾ ಕರಾವಳಿಯಲ್ಲಿ ಹಾಗೂ 2010ರ ನವೆಂಬರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತಗಳು ಪ್ರಮುಖವಾದವು. ಈ ಅಪಘಾತಗಳಲ್ಲಿ ಕ್ರಮವಾಗಿ 213 ಮಂದಿ ಮತ್ತು 158 ಜನರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.