ADVERTISEMENT

Plane Crash: ಉನ್ನತ ಮಟ್ಟದ ಸಮಿತಿಗೆ 3 ತಿಂಗಳು ಕಾಲಾವಕಾಶ; ವಹಿಸಿರುವ ಹೊಣೆ ಏನು?

ಶಮಿನ್‌ ಜಾಯ್‌
Published 14 ಜೂನ್ 2025, 10:00 IST
Last Updated 14 ಜೂನ್ 2025, 10:00 IST
   

ನವದೆಹಲಿ: ಅಹಮದಾಬಾದ್ ವಿಮಾನ ಅಪಘಾತದ ತನಿಖೆ ಸಲುವಾಗಿ ಸರ್ಕಾರವು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಶಿಸ್ತು ಸಮಿತಿಯನ್ನು ನೇಮಕ ಮಾಡಿದ್ದು, ಏರ್‌ ಇಂಡಿಯಾದ ಡ್ರೀಮ್‌ಲೈನರ್‌ ವಿಮಾನ ಪತನಕ್ಕೆ 'ಮೂಲ ಕಾರಣ'ವೇನು ಎಂಬುದನ್ನು ಪತ್ತೆ ಹಚ್ಚುವ ಹಾಗೂ ಭವಿಷ್ಯದ‌ಲ್ಲಿ ಇಂತಹ ದುರಂತಗಳನ್ನು ತಡೆಯಲು, ನಿರ್ವಹಿಸಲು ಅನುಕೂಲವಾಗುವಂತೆ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸುವ ಹೊಣೆಯನ್ನು ವಹಿಸಲಾಗಿದೆ.

ಪತನಗೊಂಡ AI–171 ವಿಮಾನಕ್ಕೆ ಸಂಬಂಧಿಸಿದ ದತ್ತಾಂಶಗಳು, ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡ್‌ಗಳು, ವಿಮಾನ ನಿರ್ವಹಣೆ ಮಾಹಿತಿ, ಎಟಿಸಿ ಲಾಗ್‌, ಸಾಕ್ಷಿಗಳು ಸೇರಿದಂತೆ ಎಲ್ಲ ದಾಖಲೆಗಳನ್ನೊಳಗೊಂಡ ವರದಿಯನ್ನು ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಡಾಗಿದೆ.

ಘಟನಾ ಸ್ಥಳದ ಫರಿಶೀಲನೆ, ಏರ್‌ ಇಂಡಿಯಾ ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಕ ಸಿಬ್ಬಂದಿಯನ್ನು ಸಂದರ್ಶಿಸಲು, ಸಂಬಂಧಪಟ್ಟ ಅಂತರರಾಷ್ಟ್ರೀಯ ಏಜೆನ್ಸಿಗಳು, ವಿದೇಶಿ ಪ್ರಜೆಗಳೊಂದಿಗೆ ಸಂವಹನ ಸಾಧಿಸಲು ಸಮಿತಿಗೆ ಅನುಮತಿ ನೀಡಲಾಗಿದೆ.

ADVERTISEMENT

'ಉನ್ನತ ಮಟ್ಟದ ಸಮಿತಿಯ ವಿಚಾರಣೆಯು ಇತರ ಸಂಸ್ಥೆಗಳ ತನಿಖೆಗೆ ಪರ್ಯಾಯವಲ್ಲ. ಆದರೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಎಸ್‌ಒಪಿ ರೂಪಿಸಲು ಇದು ಗಮನ ಹರಿಸುತ್ತದೆ' ಎಂಬುದನ್ನು ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ಸ್ಪಷ್ಟವಾಗಿ ಹೇಳಿದೆ.

ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ಈಗಾಗಲೇ ತನಿಖೆ ಆರಂಭಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಇತರ ಸಂಸ್ಥೆಗಳ ತಂಡಗಳೂ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿವೆ.

ಕೇಂದ್ರ ಸರ್ಕಾರ ಶುಕ್ರವಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ, ಗುಜರಾತ್‌ ಗೃಹ ಇಲಾಖೆ ಹಾಗೂ ಗುಜರಾತ್ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿಗಳು, ಅಹಮದಾಬಾದ್‌ ಪೊಲೀಸ್‌ ಆಯುಕ್ತ, ವಾಯು ಸೇನೆಯ ಮಹಾ ನಿರ್ದೇಶಕರು, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರನ್ನು ಒಳಗೊಂಡಿದೆ.

ಗುಪ್ತಚರ ಬ್ಯೂರೊ ವಿಶೇಷ ನಿರ್ದೇಶಕರು, ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು, ವಾಯುಯಾನ ತಜ್ಞರು, ತನಿಖಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರೂ ಸಮಿತಿಯ ಭಾಗವಾಗಿರಲಿದ್ದಾರೆ.

ಅಪಘಾತದ 'ಮೂಲ ಕಾರಣ ಪತ್ತೆ' ಉನ್ನತ ಮಟ್ಟದ ಸಮಿತಿಯ ಆದ್ಯತೆಯಾಗಿದೆ. ಯಾಂತ್ರಿಕ ವೈಫಲ್ಯ, ಮಾನವ ದೋಷ, ಪ್ರತಿಕೂಲ ಹವಾಮಾನ ಅಥವಾ ಇನ್ಯಾವುದೇ ಕಾರಣವನ್ನು ನಿರ್ಣಯಿಸಲು ಅದರಿಂದ ಸಾಧ್ಯವಾಗಲಿದೆ. ಅದರೊಟ್ಟಿಗೆ, ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸಿದಂತೆ ತಡೆಯಲು ಅಗತ್ಯ ಸುಧಾರಣಾ ಕ್ರಮಗಳನ್ನು ಶಿಫಾರಸ್ಸುಗಳನ್ನು ಮಾಡುವುದು, ಉತ್ತಮ ಅಂತರರಾಷ್ಟ್ರೀಯ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಕ್ತವಾದ SOP ರೂಪಿಸುವ ಹೊಣೆ ಸಮಿತಿಯದ್ದು.

ತುರ್ತು ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವಣ ಸಮನ್ವಯತೆ, ತಕ್ಷಣದ ಪ್ರತಿಕ್ರಿಯೆ, ರಕ್ಷಣಾ ಕಾರ್ಯಾಚರಣೆಗಳ ಕುರಿತಾಗಿಯೂ ಸಮಿತಿ ಪರಿಶೀಲನೆ ನಡೆಸಲಿದೆ. ಇಂತಹ ಪ್ರಕರಣಗಳನ್ನು ನಿರ್ವಹಿಸುವ ಸಂಬಂಧ ಸದ್ಯ ಇರುವ ಮಾರ್ಗಸೂಚಿಗಳನ್ನು ಪರಾಮರ್ಶಿಸಲಿದೆ. ಸಮಗ್ರ SOP ರೂಪಿಸುವ ಮುನ್ನ, ಹಿಂದಿನ ಅಪಘಾತಗಳ ದಾಖಲೆ ಅವಲೋಕಿಸಲಿದ್ದು, ದುರಂತ ಪರಿಸ್ಥಿತಿ ನಿರ್ವಹಣೆಯಲ್ಲಿ ಎಲ್ಲ ಏಜೆನ್ಸಿಗಳ ಪಾತ್ರವೇನು ಎಂಬುದನ್ನೂ ಸೂಚಿಸಲಿದೆ.

ಅಪಘಾತ ನಂತರದ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಸದ್ಯದ ನಿಯಮಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಬೇಕು, ಕಾರ್ಯಾಚರಣೆಗಳಲ್ಲಿ ಮಾಡಿಕೊಳ್ಳಬೇಕಿರುವ ಸುಧಾರಣೆಗಳೇನು ಮತ್ತು ತರಬೇತಿ ಹೆಚ್ಚಿಸುವ ಕುರಿತೂ ಸಲಹೆಗಳನ್ನು ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.