ಜಾನ್ ಬ್ರಿಟ್ಟಾಸ್
Credit: Facebook/John Brittas
ನವದೆಹಲಿ: ನಟ ಮೋಹನ್ಲಾಲ್ ಅವರ ‘ಎಲ್2: ಎಂಪುರಾನ್’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿರುವ ಕುರಿತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪ್ರಸ್ತಾಪಿಸಿದ್ದಾರೆ.
ಎಂಪುರಾನ್ ಚಿತ್ರ ಬಿಡುಗಡೆಯಾದ ಬಳಿಕ ಅನೇಕರಿಂದ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಜಾನ್ ಬ್ರಿಟ್ಟಾಸ್ ಕಿಡಿಕಾರಿದ್ದಾರೆ.
ಈ ದೇಶದಲ್ಲಿ ದುರದೃಷ್ಟಕರ ಘಟನೆಗಳು ನಡೆಯುತ್ತಿವೆ. ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
‘ಸೆನ್ಸಾರ್ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾವನ್ನು ಮತ್ತೆ ಸೆನ್ಸಾರ್ ಮಂಡಳಿಗೆ ವಾಪಸ್ ಕಳುಹಿಸುವಂತೆ ಹಾಗೂ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರುವಂತೆ ಒತ್ತಾಯಿಸಲಾಗಿದೆ. ಬೆದರಿಕೆಗಳು ಹಾಕಿದ ಹಿನ್ನೆಲೆಯಲ್ಲಿ 24 ದೃಶ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ನಟ ಮೋಹನ್ಲಾಲ್ ಅವರನ್ನು ‘ದೇಶ ವಿರೋಧಿ’ ಎಂಬಂತೆ ಬಿಂಬಿಸಲಾಗುತ್ತಿದೆ. ಈ ದೇಶದಲ್ಲಿ ಪರಿಸ್ಥಿತಿ ಹೀಗಾದರೆ, ಜನರಿಗೆ ನೀಡಲಾಗುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಜಾನ್ ಬ್ರಿಟ್ಟಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.