ಸ್ವಾತಿ ಮಾಲಿವಾಲ್ ಮತ್ತು ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಮಾಜಿ ಡಿಸಿಎಂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಲು ಕಂಡಿರುವ ಬಗ್ಗೆ ಎಎಪಿ ಬಂಡಾಯ ನಾಯಕಿ ಹಾಗೂ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಪ್ರತಿಕ್ರಿಯಿಸಿದ್ದಾರೆ.
‘ಇತಿಹಾಸ ನೋಡಿದರೆ ಯಾವುದೇ ಮಹಿಳೆಗೆ ನೋವುಂಟು ಮಾಡಿದರೆ, ಅದನ್ನು ಮಾಡಿದವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಕೇಳಿದ್ದೇವೆ. ಇದು ಈಗ ನಿಜವಾಗಿದೆ. ಜಲಮಾಲಿನ್ಯ, ವಾಯುಮಾಲಿನ್ಯ ಸಮಸ್ಯೆಗಳಿಂದ ಅರವಿಂದ ಕೇಜ್ರಿವಾಲ್ ಅವರೇ ಸ್ಥಾನ ಕಳೆದುಕೊಂಡಿದ್ದಾರೆ’ ಎಂದು ಸ್ವಾತಿ ಮಾಲಿವಾಲ್ ವಾಗ್ದಾಳಿ ನಡೆಸಿದ್ದಾರೆ.
‘ಎಎಪಿ ಪಕ್ಷದವರು ಸುಳ್ಳು ಹೇಳಬಹುದು ಎಂದು ಭಾವಿಸುತ್ತಾರೆ. ಆದರೆ, ಜನರು ನಮ್ಮ ನಾಯಕತ್ವವನ್ನು ಮಾತ್ರ ನಂಬುತ್ತಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯವರನ್ನು ಅಭಿನಂದಿಸುತ್ತೇನೆ. ಜನರು ಭರವಸೆಯಿಂದ ಮತ ಹಾಕಿದ್ದಾರೆ. ಹಾಗಾಗಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಸ್ವಾತಿ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 2024ರ ಮೇ 13ರಂದು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಈ ಘಟನೆ ದೆಹಲಿಯಲ್ಲಿ ದೊಡ್ಡ ವಿವಾದಕ್ಕೀಡಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.