ಮುಂಬೈ: ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ಕೊಟ್ಟಿರುವುದಕ್ಕೆ ಮಾಜಿ ಸಿಎಂ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳರಿಗೆ (ಶಿಂದೆ ಬಣ) ಪವಿತ್ರವಾದ ‘ಬಿಲ್ಲು–ಬಾಣ’ ಒಳಗೊಂಡ ಪಕ್ಷದ ಚಿಹ್ನೆಯನ್ನು ನೀಡಲಾಗಿದೆ. ಹಾಗೆಯೇ ‘ಪಂಜು’ (ಮಶಾಲ್) ಅನ್ನು ತೆಗೆದುಕೊಳ್ಳಬಹುದು ಎಂದು ಕಿಡಿಕಾರಿದ್ದಾರೆ.
‘ನೀವು (ಶಿಂದೆ ಬಣ) ಗಂಡಸರಾಗಿದ್ದರೆ, ಕದ್ದ ‘ಬಿಲ್ಲು ಮತ್ತು ಬಾಣ’ದೊಂದಿಗೆ ಜನರ ಮುಂದೆ ಬನ್ನಿ. ನಾವು ‘ಜ್ಯೋತಿ’ಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತೇವೆ. ಇದೀಗ ಯುದ್ಧ ಆರಂಭವಾಗಿದೆ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ ಎಂದು ಗುಡುಗಿದ್ದಾರೆ.
‘ಶಿಂದೆ ಬಣಕ್ಕೆ ‘ಶಿವಸೇನಾ’ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಮುಖ ಬೇಕಿದೆ. ಆದರೆ, ಶಿವಸೇನಾ ಕುಟುಂಬವಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರಕ್ಕೆ ಬರಲು ಬಾಳಾಸಾಹೇಬ್ ಠಾಕ್ರೆಯ ಮುಖವಾಡ ಬೇಕು. ಯಾರ ಮುಖ ನಿಜ ಮತ್ತು ಯಾರ ಮುಖ ನಿಜವಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ಅವರಿಗೆ ತಕ್ಕೆ ಪಾಠ ಕಲಿಸಲಿದ್ದಾರೆ ಠಾಕ್ರೆ ದೂರಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.