ADVERTISEMENT

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ನಮ್ಮವರೇ: ಎಬಿವಿಪಿ ಮಾಜಿ ನಾಯಕರು

ಜೆಎನ್‌ಯು ದೇಶದ್ರೋಹ ಪ್ರಕರಣ

ಏಜೆನ್ಸೀಸ್
Published 17 ಜನವರಿ 2019, 9:40 IST
Last Updated 17 ಜನವರಿ 2019, 9:40 IST
   

ನವದೆಹಲಿ: ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ(ಜೆಎನ್‌ಯು) ಕ್ಯಾಂಪಸ್‌ನಲ್ಲಿ 2016ರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ನಮ್ಮವರೇ ಎಂದುಎಬಿವಿಪಿ ಮಾಜಿ ನಾಯಕರಿಬ್ಬರು ಹೇಳಿಕೆ ನೀಡಿದ್ದಾರೆ.

ದಲಿತ ವಿದ್ಯಾರ್ಥಿ ರೋಹಿತ್‌ ವೆಮುಲ ಆತ್ಮಹತ್ಯೆ ಪ್ರಕರಣದ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ, ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವಿವಾದ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತುಎಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಬಿವಿಪಿ ಸಂಘಟನೆಯ ಮಾಜಿ ಉಪಾಧ್ಯಕ್ಷ ಜತಿನ್‌ ಗೊರಯ್ಯ, ಮಾಜಿ ಕಾರ್ಯದರ್ಶಿ ಪ್ರದೀಪ್‌ ನರ್ವಾಲ್‌ ಹೇಳಿದ್ದಾರೆ.

ಕೆಲದಿನಗಳ ಬಳಿಕ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ADVERTISEMENT

ಎರಡು ವರ್ಷಗಳ ಹಿಂದಿನ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆಜೆಎನ್‌ಯುವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌, ಸಯ್ಯದ್‌ ಖಾಲಿದ್‌ ಹಾಗೂ ಅನಿರ್ಬಾನ್‌ ಭಟ್ಟಾಚಾರ್ಯ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೇಶದ್ರೋಹ ಪ್ರಕರಣವನ್ನೂದಾಖಲಿಸಲಾಗಿತ್ತು.

ಈ ಬಗ್ಗೆ ಮಾತನಾಡಿರುವ ಪ್ರದೀಪ್‌ ನರ್ವಾಲ್‌, ‘ಕಾರ್ಯಕ್ರಮದ ವೇಳೆ ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿದವರು ಎಬಿವಿಪಿ ಸದಸ್ಯರೆ’ ಎಂದಿದ್ದಾರೆ.

‘ನಾವಿಬ್ಬರು ದಲಿತರಾಗಿರುವುದರಿಂದ ರೋಹಿತ್‌ ವೆಮುಲ ಆತ್ಮಹತ್ಯೆ ಪ್ರಕರಣ ಸಂಬಂಧ ವಾಹಿನಿಗಳಿಗೆ ಹೇಳಿಕೆ ನೀಡುವ ವೇಳೆ ಎಬಿವಿಪಿ ಪರವಾಗಿ ಹಾಗೂ ವೆಮುಲ ಭಯೋತ್ಪಾದಕ ಎಂದು ಬಿಂಬಿಸುವಂತೆ ನಮ್ಮನ್ನು ಒತ್ತಾಯಿಸಲಾಗುತ್ತಿತ್ತು.ಅದನ್ನು ನಿರಾಕರಿಸಿದ್ದೆವು. ಫೆಬ್ರುವರಿ 9ರಂದು ನಡೆದ ಕಾರ್ಯಕ್ರಮವನ್ನು ವಿವಾದ ಸೃಷ್ಟಿಸಲು ಬಳಸಿಕೊಂಡಎಬಿವಿಪಿ ನಾಯಕರು,ಆತ್ಮಹತ್ಯೆ ಪ್ರಕರಣದ ಗಮನವನ್ನು ಬೇರೆಡೆ ಸೆಳೆದರು’ ಎಂದೂ ತಿಳಿಸಿದ್ದಾರೆ.

ನರ್ವಾಲ್‌ ಹೇಳಿಕೆ ಸಮರ್ಥಿಸಿಕೊಂಡಿರುವ ಗೊರಯ್ಯ, ‘ಈ ಕುರಿತು ಜೆಎನ್‌ಯುಎಬಿವಿಪಿ ಸಂಘಟನೆಯ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಚರ್ಚೆಗಳು ನಡೆದಿದ್ದವು’ ಎಂದಿದ್ದಾರೆ.

ಇದನ್ನು ಅಲ್ಲಗಳೆದಿರುವಎಬಿವಿಪಿಮಾಜಿ ಜಂಟಿ ಕಾರ್ಯದರ್ಶಿ ಸೌರಭ್‌ ಶರ್ಮಾ, ‘ಅವರಿಬ್ಬರೂ(ಪ್ರದೀಪ್‌ ನರ್ವಾಲ್‌, ಜತಿನ್‌ ಗೊರಯ್ಯ) ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಪ್ರತಿಕಾಗೋಷ್ಠಿ ನಡೆಸಿರುವ ಅವರು ಇಂತಹ ಸುಳ್ಳುಗಳನ್ನು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.