ಕೇಂದ್ರ ಗೃಹ ಸಚಿವ ಅಮಿತ್ ಶಾ
–ಪಿಟಿಐ ಚಿತ್ರ
ದಂತೆವಾಡಾ: ‘ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮುಖ್ಯವಾಹಿನಿಗೆ ಬನ್ನಿ. ನೀವು ಕೂಡ ನಮ್ಮವರೇ ಆಗಿದ್ದೀರಿ. ನಿಮ್ಮನ್ನು ಕೊಲ್ಲುವುದರಿಂದ ನಮಗೆ ಖುಷಿ ಸಿಗುವುದಿಲ್ಲ’ ಎಂದು ಗೃಹ ಸಚಿವ ಅಮಿತ್ ಶಾ ಅವರು ನಕ್ಸಲರನ್ನು ಶನಿವಾರ ಉದ್ದೇಶಿಸಿ ಮಾತನಾಡಿದರು.
‘ಬತ್ಸರ್ ಪಂಡುಮ್’ ಹಬ್ಬದ ಪ್ರಯುಕ್ತ ಛತ್ತೀಸಗಢ ಸರ್ಕಾರವು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘2026ರ ಮಾರ್ಚ್ ಒಳಗಾಗಿ ನಾವು ದೇಶವನ್ನು ನಕ್ಸಲ್ ಮುಕ್ತ ಮಾಡುತ್ತೇವೆ. ನಕ್ಸಲರು ಬತ್ಸರ್ ಪ್ರದೇಶದಲ್ಲಿರುವ ಬುಡಕಟ್ಟು ಜನರ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ’ ಎಂದರು.
‘ನಕ್ಸಲ್ ಚಳವಳಿ ತೊರೆದು ಅಭಿವೃದ್ಧಿ ಪ್ರಕ್ರಿಯೆಯ ಭಾಗವಾಗಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿಮಗೆ ರಕ್ಷಣೆ ದೊರೆಯುತ್ತದೆ. ಈ ಪ್ರದೇಶವು ಅಭಿವೃದ್ಧಿಯನ್ನು ಬಯಸುತ್ತಿದೆ. ಈ ಪ್ರದೇಶದಲ್ಲಿ ಕಳೆದ 50 ವರ್ಷಗಳಿಂದ ಆಗದ ಅಭಿವೃದ್ಧಿಯನ್ನು ಪ್ರಧಾನಿ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಮಾಡಲು ಬಯಸಿದ್ದಾರೆ. ಮಕ್ಕಳು ಶಾಲೆಗೆ ಹೋಗುವುದು, ಆಸ್ಪತ್ರೆಗಳ ನಿರ್ಮಾಣದಿಂದ ಮಾತ್ರವೇ ಇವೆಲ್ಲವೂ ಸಾಧ್ಯವಾಗುತ್ತದೆ’ ಎಂದರು.
‘ಬತ್ಸರ್ ಪ್ರದೇಶದಲ್ಲಿ ಯಾವ ಗ್ರಾಮವು ನಕ್ಸಲ್ ಮುಕ್ತ ಎಂದು ಘೋಷಿಸಿಕೊಳ್ಳುತ್ತದೆಯೋ ಅಂಥ ಗ್ರಾಮಗಳ ಅಭಿವೃದ್ಧಿಗೆ ₹1 ಕೋಟಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಈಗ ನೀವು ನಿಮ್ಮ ಗ್ರಾಮ, ಮನೆಗಳನ್ನು ನಕ್ಸಲ್ ಮುಕ್ತ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.