ADVERTISEMENT

‘ಮಹಾ’ ಸರ್ಕಾರ ರಚನೆಗೆ ಕೊನೇ ಕ್ಷಣದ ಕಸರತ್ತು: ಉದ್ಧವ್‌ ಮುಂದಿನ ಸಿಎಂ –ಪವಾರ್‌

ಏಜೆನ್ಸೀಸ್
Published 22 ನವೆಂಬರ್ 2019, 14:31 IST
Last Updated 22 ನವೆಂಬರ್ 2019, 14:31 IST
ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ
ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ    

ಮುಂಬೈ: ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೆಸರನ್ನು ಅಂತಿಮಗೊಳಿಸಿವೆ. ರಾಜ್ಯದಲ್ಲಿಶೀಘ್ರವೇ ಸರ್ಕಾರ ರಚಿಸುವ ಸಂಬಂಧ ಚರ್ಚೆ ನಡೆಸಿರುವ ಮೂರೂ ಪಕ್ಷಗಳು ಸಾಮಾನ್ಯ ಕನಿಷ್ಠಕಾರ್ಯಕ್ರಮದಡಿಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳಲಿವೆ.

ಮುಂಬೈನಲ್ಲಿರುವ ನೆಹರೂ ಕೇಂದ್ರದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಉದ್ಧವ್‌ ಠಾಕ್ರೆ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ನಂತರ ಮಾತನಾಡಿದ ಠಾಕ್ರೆ, ‘ಮಾತುಕತೆ ಇನ್ನೂಮುಂದುವರಿದಿದೆ. ನಮ್ಮ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಸಾಗಿವೆ’ ಎಂದರು.

ಶುಕ್ರವಾರ ನಡೆಸಲು ಉದ್ದೇಶಿಸಿದ್ದಜಂಟಿ ಪತ್ರಿಕಾಗೋಷ್ಠಿಯನ್ನು, ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಶನಿವಾರ ನಡೆಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಶಿವಸೇನೆ 16, ಎನ್‌ಸಿಪಿ 14 ಹಾಗೂ ಕಾಂಗ್ರೆಸ್‌ 12 ಸಚಿವ ಸ್ಥಾನಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಮುಂಬೈನಲ್ಲಿರುವ ಶರದ್‌ ಪವಾರ್‌ ಅವರ ನಿವಾಸಕ್ಕೆ, ಪುತ್ರ ಆದಿತ್ಯ ಠಾಕ್ರೆ ಜೊತೆ ಗುರುವಾರ ಸಂಜೆ ತೆರಳಿದ್ದ ಉದ್ಧವ್‌ ಸರ್ಕಾರ ರಚನೆ ಸಂಬಂಧ ಸಭೆ ನಡೆಸಿದ್ದರು. ಸಭೆಯಲ್ಲಿ ಶಿವಸೇನೆಯ ವಕ್ತಾರ ಸಂಜಯ್‌ ರಾವುತ್‌ ಹಾಗೂ ಪವಾರ್‌ ಸೋದರಳಿಯ ಅಜಿತ್‌ ಪವಾರ್‌ ಅವರೂ ಉಪಸ್ಥಿತರಿದ್ದರು.

ಸರ್ಕಾರ ಮುನ್ನಡೆಸುವಂತೆ ಸಭೆಯಲ್ಲಿದ್ದ ಎಲ್ಲರೂ ಠಾಕ್ರೆಯನ್ನುಒತ್ತಾಯಿಸಿದ್ದರು. ಆದರೆ, ಸಂಜಯ್‌ ರಾವುತ್‌ ಮುಖ್ಯಮಂತ್ರಿಯಾಗಲಿ ಎಂದು ಉದ್ಧವ್‌ ಹೇಳಿದ್ದರು ಎನ್ನಲಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದಹೊರ ಬಂದ ಬಳಿಕ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಬೆಂಬಲ ಪಡೆದು ಸರ್ಕಾರ ರಚಿಸುವ ಕಸರತ್ತನ್ನುಶಿವಸೇನಾ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.