ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯು ಡಿಸೆಂಬರ್ 14ರಂದು ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದರು.
ಫಡಣವೀಸ್ ಅವರು ಬುಧವಾರ ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾಗಲಿದ್ದಾರೆ. ಇದು ಸೌಜನ್ಯದ ಭೇಟಿಯಷ್ಟೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
‘ಶಿವಸೇನಾಗೆ (ಶಿಂದೆ ಬಣ) ಗೃಹ ಇಲಾಖೆ ಸಿಗುವುದಿಲ್ಲ ಮತ್ತು ಕಂದಾಯ ಇಲಾಖೆಯನ್ನು ನೀಡುವ ಸಾಧ್ಯತೆ ಸಹ ಇಲ್ಲ. ನಗರಾಭಿವೃದ್ಧಿ ಇಲಾಖೆ ಖಾತೆ ಲಭಿಸಬಹುದು’ ಎಂದು ಹೆಸರು ಹೇಳಲು ಬಯಸದ ಬಿಜೆಪಿ ನಾಯಕರೊಬ್ಬರು ಹೇಳಿದರು.
ಮುಖ್ಯಮಂತ್ರಿ ಸೇರಿದಂತೆ 21ರಿಂದ 22 ಸಚಿವರ ಸಂಪುಟ ರಚನೆಯನ್ನು ಬಿಜೆಪಿ ನಿರೀಕ್ಷಿಸುತ್ತಿದೆ. ನಾಲ್ಕರಿಂದ ಐದು ಸಚಿವ ಸ್ಥಾನಗಳನ್ನು ಖಾಲಿ ಬಿಡುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.