ADVERTISEMENT

ಕಾರ್ಯಾಚರಣೆ ವೈಫಲ್ಯವಾಗಿಲ್ಲ, 25-30 ನಕ್ಸಲರ ಹತ್ಯೆ: ಸಿಆರ್‌ಪಿಎಫ್ ಡಿಜಿ

ಏಜೆನ್ಸೀಸ್
Published 4 ಏಪ್ರಿಲ್ 2021, 16:18 IST
Last Updated 4 ಏಪ್ರಿಲ್ 2021, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಛತ್ತೀಸಗಡದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಅಥವಾ ಗುಪ್ತಚರ ವೈಫ್ಯಲ್ಯವಾಗಿಲ್ಲ, 25ರಿಂದ 30 ನಕ್ಸಲರನ್ನು ಹತ್ಯೆಗೈಯಲಾಗಿದೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲ್‌ದೀಪ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಛತ್ತೀಸಗಡದಲ್ಲಿ ನಕ್ಸಲ್ ದಾಳಿಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿರುವ ಕುಲ್‌ದೀಪ್ ಸಿಂಗ್ ತಿಳಿಸಿದ್ದಾರೆ.

ಗುಪ್ತಚರ ಅಥವಾ ಕಾರ್ಯಾಚರಣೆಯಲ್ಲಿ ವೈಫಲ್ಯವಾಗಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇದು ಕೇವಲ ಗುಪ್ತಚರ ವೈಫಲ್ಯವಾಗಿದ್ದರೆ, ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿರಲಿಲ್ಲ. ಹಾಗೆಯೇ ಕಾರ್ಯಾಚರಣೆ ವೈಫಲ್ಯವಾಗಿದ್ದರೆ ಅನೇಕ ನಕ್ಸಲರು ಬಲಿಯಾಗುತ್ತಿರಲಿಲ್ಲ ಎಂದು ಕುಲ್‌ದೀಪ್ ವಿವರಿಸಿದರು.

ADVERTISEMENT

ಎನ್‌ಕೌಂಟರ್‌ನಲ್ಲಿ ನಕ್ಸಲರ ಸಾವು-ನೋವುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹತರಾಗಿರುವ ಮತ್ತು ಗಾಯಾಳುಗಳ ಮೃತದೇಹವನ್ನು ಸ್ಥಳದಿಂದ ಸಾಗಿಸಲು ಮೂರು ಟ್ರ್ಯಾಕ್ಟರ್‌ಗಳನ್ನು ನಕ್ಸಲರು ಬಳಸಿದ್ದರು. ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆಂದು ನಿಖರವಾಗಿ ಹೇಳುವುದು ಕಷ್ಟ. ಅದು 25-30ಕ್ಕಿಂತ ಕಡಿಮೆಯಾಗಿರಲಾರದು ಎಂದು ಹೇಳಿದ್ದಾರೆ.

ನಕ್ಸಲ್ ಕಾರ್ಯಾಚರಣೆಯ ವೇಳೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಸೋಮವಾರ ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಏತನ್ಮಧ್ಯೆ ನಕ್ಸಲ್ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾನುವಾರದಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಇಲಾಖೆಯ ನಿರ್ದೇಶಕ ಅರವಿಂದ್ ಕುಮಾರ್, ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಜಾಪುರ-ಸುಕ್ಮಾ ಪ್ರದೇಶದಲ್ಲಿ ನಡೆದ ನಕ್ಸಲ್ ವಿರುದ್ಧದ ಎನ್‌ಕೌಂಟರ್‌ನಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 30 ಮಂದಿ ಯೋಧರು ಗಾಯಗೊಂಡಿದ್ದಾರೆ. ಅಲ್ಲದೆ ಭದ್ರತಾ ಪಡೆಯಶಸ್ತ್ರಾಸ್ತ್ರಗಳನ್ನು ನಕ್ಸಲರು ಅಪಹರಿಸಿದ್ದರು.

ಇವನ್ನೂ ಓದಿ:
ನಕ್ಸಲರ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ: ಸೋನಿಯಾ ಗಾಂಧಿ



ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.