ADVERTISEMENT

Plane Crash | 99 ಮಂದಿಯ ಗುರುತು ಪತ್ತೆ: 76 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

ಪಿಟಿಐ
Published 16 ಜೂನ್ 2025, 10:28 IST
Last Updated 16 ಜೂನ್ 2025, 10:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಅಹಮದಾಬಾದ್‌ : ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 270 ಜನರ ಪೈಕಿ, 119 ಮಂದಿಯ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಈವರೆಗೆ ಗುರುತಿಸಲಾಗಿದೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ 76 ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ADVERTISEMENT

‘ಸಾಧ್ಯವಾದಷ್ಟು ಬೇಗ ಡಿಎನ್ಎ ಪರೀಕ್ಷೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. 72 ತಾಸುಗಳ ಬಳಿಕವೂ ಪರೀಕ್ಷೆ ಫಲಿತಾಂಶ ಲಭ್ಯವಾಗಿಲ್ಲ ಎಂದು ಕೆಲವರು ದೂರುತ್ತಿದ್ದಾರೆ. ಆತಂಕಕ್ಕೊಳಗಾಗದಿರಿ ಎಂದು ಅವರಲ್ಲಿ ಮನವಿ ಮಾಡುತ್ತೇನೆ’ ಎಂದು ಸಿವಿಲ್‌ ಸೂಪರಿಂಟೆಂಡೆಂಟ್ ಡಾ.ರಾಕೇಶ್‌ ಜೋಶಿ ಅವರು ತಿಳಿಸಿದರು.

ಏರ್‌ಇಂಡಿಯಾ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ಘಟನಾಸ್ಥಳದಲ್ಲಿದ್ದ ಎಂಬಿಬಿಎಸ್‌ ವಿದ್ಯಾರ್ಥಿಗಳೂ ಸೇರಿ 29 ಮಂದಿ ಮೃತಪಟ್ಟಿದ್ದಾರೆ.

ವಿಮಾನ ಅಪಘಾತ ತನಿಖಾ ಸಂಸ್ಥೆಯು (ಎಎಐಬಿ) ಘಟನೆಯ ತಾಂತ್ರಿಕ ಅಂಶಗಳ ಬಗ್ಗೆ ತನಿಖೆ ನಡೆಸಿದರೆ ಉನ್ನತ ಮಟ್ಟದ ಸಮಿತಿಯು ಸಮಗ್ರ ವಿಶ್ಲೇಷಣೆ ನಡೆಸಿ ವಿಮಾನಯಾನದ ಭವಿಷ್ಯದ ಸುರಕ್ಷತೆಗಾಗಿ ಮಾರ್ಗಸೂಚಿಯನ್ನು ನೀಡುತ್ತದೆ
ಕೆ.ರಾಮಮೋಹನ್‌ ನಾಯ್ಡು ನಾಗರಿಕ ವಿಮಾನಯಾನ ಸಚಿವ
ವಿಜಯ್‌ ರೂಪಾನಿ ಅಂತ್ಯಸಂಸ್ಕಾರ
ವಿಜಯ್‌ ರೂಪಾನಿ ಅವರ ಮೃತದೇಹವನ್ನು ಅವರ ಪತ್ನಿ ಅಂಜಲಿ ರೂಪಾನಿ ಮತ್ತು ಕುಟುಂಬದ ಸದಸ್ಯರಿಗೆ ಸೋಮವಾರ ಹಸ್ತಾಂತರಿಸಲಾಯಿತು. ಅದೇ ದಿನ ಸಂಜೆ ರಾಜ್‌ಕೋಟ್‌ನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರೂಪಾನಿ ಅವರ ಮೃತದೇಹವು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಕುಟುಂಬಸ್ಥರ ಡಿಎನ್‌ಎ ಮಾದರಿ ಪಡೆದು ಮೃತದೇಹವನ್ನು ಭಾನುವಾರ ಗುರುತಿಸಲಾಗಿತ್ತು.
ಬ್ಲ್ಯಾಕ್ಸ್‌ ಬಾಕ್ಸ್‌ ಪತ್ತೆ: ತನಿಖೆಗೆ ನೆರವು
ನವದೆಹಲಿ: ಪತನಗೊಂಡಿದ್ದ ಏರ್‌ ಇಂಡಿಯಾ ಬೋಯಿಂಗ್‌ 787–8 ವಿಮಾನದ ಬ್ಲ್ಯಾಕ್‌ ಬಾಕ್ಸ್‌  ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌’ (ಸಿವಿಆರ್) ಮತ್ತು ‘ಡಿಜಿಟಲ್‌ ಫ್ಲೈಟ್‌ ಡೇಟಾ ರೆಕಾರ್ಡರ್‌’ (ಡಿಎಫ್‌ಡಿಆರ್‌) ಪತ್ತೆಯಾಗಿರುವುದು ದುರಂತದ ಕಾರಣ ಪತ್ತೆಗೆ ತನಿಖಾಧಿಕಾರಿಗಳಿಗೆ ಮತ್ತಷ್ಟು ನೆರವಾಗಿದೆ. ಕೆಲವೊಮ್ಮೆ ಒಂದೇ ಬ್ಲ್ಯಾಕ್‌ಬಾಕ್ಸ್‌ನಲ್ಲಿ ಸಿವಿಆರ್‌ ಮತ್ತು ಡಿಎಫ್‌ಡಿಆರ್ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಸಿವಿಆರ್‌ ಮತ್ತು ಡಿಎಫ್‌ಡಿಆರ್‌ ಪ್ರತ್ಯೇಕವಾಗಿರುತ್ತವೆ.  ಸಿವಿಆರ್‌ನಲ್ಲಿ ಕಾಕ್‌ಪಿಟ್‌ ಮತ್ತು ಪೈಲಟ್‌ಗಳ ಸಂವಹನವು ರೆಕಾರ್ಡ್‌ ಆಗಿರುತ್ತದೆ. ಡಿಎಫ್‌ಡಿಆರ್‌ನಲ್ಲಿ ವಿಮಾನ ಹಾರಾಟದ ಎತ್ತರ ಗಾಳಿಯ ವೇಗ ಸೇರಿದಂತೆ 80 ರೀತಿಯ ಮಾಹಿತಿ ಸಂಗ್ರಹವಾಗಿರುತ್ತದೆ. ಬ್ಲ್ಯಾಕ್‌ ಬಾಕ್ಸ್‌ ಎಂದು ಕರೆದರೂ ಇದು ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ತಜ್ಞರಿಗೆ ಇದರಲ್ಲಿರುವ ಮಾಹಿತಿಯನ್ನು ಕಲೆಹಾಕಲು ಅಂದಾಜು ಎರಡು ವಾರಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪವಾಡದ ರೀತಿ ಎದ್ದು ಬಂದ ವಿಶ್ವಾಸ್‌ 
ಭೀಕರ ವಿಮಾನ ದುರಂತದಲ್ಲಿ ಪವಾಡದ ರೀತಿ ಬದುಕುಳಿದಿರುವ ವಿಶ್ವಾಸ್‌ ಕುಮಾರ್‌ ರಮೇಶ್‌ ಅವರು ವಿಮಾನ ಪತನವಾದ ಸ್ಥಳದಿಂದ ನಡೆದು ಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬಿಳಿ ಬಣ್ಣದ ಟಿ–ಶರ್ಟ್‌ ಧರಿಸಿರುವ ಎಡಗೈನಲ್ಲಿ ಮೊಬೈಲ್‌ ಹಿಡಿದಿರುವ ರಮೇಶ್‌ ಅವರು ವಿಮಾನ ಪತನವಾದ ಸ್ಥಳದಿಂದ ನಡೆದು ಬರುತ್ತಿರುವ ಮತ್ತು ಅವರ ಹಿಂದೆ ದಟ್ಟವಾದ ಹೊಗೆ ಆವರಿಸಿರುವ ದೃಶ್ಯವು ವಿಡಿಯೊದಲ್ಲಿದೆ.  ಸ್ಥಳೀಯರು ವಿಶ್ವಾಸ್ ಅವರ ಕೈಹಿಡಿದು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯವೂ ಅದರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.