ರೇವಂತ್ ರೆಡ್ಡಿ
ಹೈದರಾಬಾದ್: 2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸಿಬಿಎಸ್ಇ, ಐಸಿಎಸ್ಇ, ಐಬಿ ಮತ್ತು ಇತರ ಮಂಡಳಿಗಳ ಸಂಯೋಜಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವಾಗಿ ಕಲಿಸಬೇಕು ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
2018ರಲ್ಲಿ ತೆಲಂಗಾಣದ ಸರ್ಕಾರಿ ಜಿಲ್ಲಾ ಪರಿಷತ್, ಮಂಡಲ ಪರಿಷತ್, ಅನುದಾನಿತ ಶಾಲೆಗಳು ಸೇರಿದಂತೆ ಸಿಬಿಎಸ್ಇ, ಐಸಿಎಸ್ಇ, ಐಬಿ ಮತ್ತು ಇತರ ಮಂಡಳಿಯ ಸಂಯೋಜಿತ ಶಾಲೆಗಳಲ್ಲಿ ತೆಲುಗು ಕಡ್ಡಾಯ ಬೋಧನೆ ಮತ್ತು ಕಲಿಸುವಂತೆ ರಾಜ್ಯ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. ಆದಾಗ್ಯೂ, ಹಿಂದಿನ ಬಿಆರ್ಎಸ್ ಸರ್ಕಾರ ವಿವಿಧ ಕಾರಣಗಳಿಂದ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ತೆಲುಗು ಬೋಧನೆಯನ್ನು ಜಾರಿಗೊಳಿಸಲಿಲ್ಲ ಎಂದು ಈಗಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ತೆಲುಗು ಅನುಷ್ಠಾನಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಿಬಿಎಸ್ಇ ಮತ್ತು ಇತರ ಮಂಡಳಿಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸುಲಭವಾಗುವಂತೆ ‘ಸರಳ ತೆಲುಗು’, ‘ವೆನ್ನೆಲಾ’ ಪಠ್ಯ ಪುಸ್ತಕ ಅನ್ನು ಬಳಸುವಂತೆ ಸಿಎಂ ರೇವಂತ್ ರೆಡ್ಡಿ ಸಲಹೆ ನೀಡಿದ್ದಾರೆ.
‘ಸರಳ ತೆಲುಗು’ ಪಠ್ಯಪುಸ್ತಕದ ಅನುಷ್ಠಾನವು ಮಾತೃಭಾಷೆ ತೆಲುಗು ಅಲ್ಲದ ವಿದ್ಯಾರ್ಥಿಗಳಿಗೆ ಮತ್ತು ಇತರ ರಾಜ್ಯಗಳಿಗೆ ಸೇರಿದವರಿಗೆ ಉಪಯುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.