ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ
ಪಿಟಿಐ ಚಿತ್ರಗಳು
ಮುಂಬೈ: ರಾಜಕೀಯ ಕಾರಣದಿಂದ ದೂರವಿರುವ ಸೋದರ ಸಂಬಂಧಿಗಳೂ ಆದ, ಶಿವ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಮರಾಠಿ ಭಾಷೆಯ ಕಾರಣಕ್ಕಾಗಿ ಒಂದಾಗುತ್ತಿದ್ದಾರೆ.
ಹಿಂದಿ ಹೇರಿಕೆ ಹಾಗೂ ರಾಜ್ಯ ಸರ್ಕಾರವು ಆದೇಶಿಸಿರುವ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರದ ವಿರುದ್ಧ ಜಂಟಿ ಪ್ರತಿಭಟನೆ ನಡೆಸಲಿದ್ದಾರೆ. ಜುಲೈ 5ರಂದು ನಡೆಯುವ ಪ್ರತಿಭಟನಾ ವೇದಿಕೆಯಲ್ಲಿ ಇಬ್ಬರೂ ಪಾಲ್ಗೊಳ್ಳಲಿದ್ದಾರೆ.
ಗುರುವಾರ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ‘ಹಿಂದಿ ಹೇರಿಕೆ ಹಾಗೂ ತ್ರಿಭಾಷಾ ಸೂತ್ರ’ವನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಾಗರಿಕ ಸಮಾಜವು ಅಜಾದ್ ಮೈದಾನದಲ್ಲಿ ಜುಲೈ 7ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಉದ್ಧವ್ ಹೇಳಿದ್ದಾರೆ. ಅಲ್ಲದೆ, ಗಿರ್ಗಾಮ್ ಚೌಪಾಟಿಯಲ್ಲಿ ಜುಲೈ 6ರಂದು ರಾಜಕೀಯೇತರ ಸಮಾವೇಶ ಆಯೋಜಿಸಿದ್ದು, ಅದರಲ್ಲಿ ಶಿವ ಸೇನಾ (ಯುಬಿಟಿ) ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಳ್ಳುವಂತೆ ರಾಜ್ ಠಾಕ್ರೆ ಆಹ್ವಾನ ನೀಡಿದ್ದಾರೆ.
ಜುಲೈ 6ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ ಠಾಕ್ರೆ ಅವರು ತಮ್ಮ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎಂದು ಶಿವ ಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.
ಇದಕ್ಕೂ ಮೊದಲು ಜುಲೈ 5ರಂದು ಎಂಎನ್ಎಸ್ ಹಾಗೂ ಶಿವ ಸೇನಾ (ಯುಬಿಟಿ) ಜಂಟಿ ಪ್ರತಿಭಟನೆ ನಡೆಸಲಿದ್ದು, ಎರಡೂ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುವುದು ಎಂದು ರಾಜ್ಯ ಸರ್ಕಾರವು ಈಚೆಗೆ ಆದೇಶ ಹೊರಡಿಸಿತ್ತು.
‘ಯಾವುದೇ ಶಾಲೆಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳು ಹಿಂದಿ ಹೊರತುಪಡಿಸಿ ಭಾರತೀಯ ಭಾಷೆಗಳನ್ನು ಕಲಿಯಲು ಬಯಸಿದರೆ ಅದಕ್ಕೆ ಅವಕಾಶ ನೀಡಲಾಗುತ್ತದೆ. ಒಬ್ಬ ಶಿಕ್ಷಕರನ್ನೂ ನೇಮಿಸಲಾಗುವುದು. ಅಗತ್ಯ ಬಿದ್ದರೆ ಆನ್ಲೈನ್ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿತ್ತು.
‘ಮಕ್ಕಳ ಮೇಲೆ ಹಿಂದಿ ಹೇರಿಕೆ ಸಲ್ಲ’
ಕೊಲ್ಹಾಪುರ: ‘ಮಹಾರಾಷ್ಟ್ರದ ಜನರು ಹಿಂದಿ ವಿರೋಧಿಗಳಲ್ಲ. ಆದರೆ 1ರಿಂದ 4ನೇ ತರಗತಿ ವಿದ್ಯಾರ್ಥಿಗಳ ಮೇಲೆ ಭಾಷೆಯನ್ನು ಹೇರುವುದು ಸರಿಯಲ್ಲ’ ಎಂದು ಎನ್ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.
‘ದೇಶದ ಶೇ 55ರಷ್ಟು ಜನರು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಹೀಗಾಗಿ ಹಿಂದಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದೂ ತಿಳಿಸಿದ್ದಾರೆ. ‘ಈ ವಯಸ್ಸಿನಲ್ಲಿ ಮಕ್ಕಳಿಗೆ ಮಾತೃಭಾಷೆ ಅತಿ ಮುಖ್ಯ. 5ನೇ ತರಗತಿ ಬಳಿಕ ಆಸಕ್ತ ಭಾಷೆಯನ್ನು ಕಲಿಯಬಹುದು’ ಎಂದಿದ್ದಾರೆ.
ಶಿವ ಸೇನಾ (ಯುಬಿಟಿ) ಹಾಗೂ ಎಂಎನ್ಎಸ್ ನಾಯಕರು ಜಂಟಿ ಪ್ರತಿಭಟನೆ ನಡೆಸುವ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಶರದ್ ಪವಾರ್ ‘ಪ್ರತಿಭಟನೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಾಲ್ಗೊಳ್ಳಬೇಕೆಂದು ಠಾಕ್ರೆಗಳು ಬಯಸಿದರೆ ಅವರ ನಿಲುವು ಹಾಗೂ ನಿಖರವಾದ ಯೋಜನೆಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.