ADVERTISEMENT

ವಿಧಾನಸಭೆ: ಸಂಗಮೇಶ್ವರ್ ಅಮಾನತು ಆದೇಶ ಹಿಂದಕ್ಕೆ ಪಡೆಯಲು ಕಾಂಗ್ರೆಸ್ ಶಾಸಕರ ಪಟ್ಟು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 7:03 IST
Last Updated 5 ಮಾರ್ಚ್ 2021, 7:03 IST
ಗುರುವಾರದ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸೆರೆ ಸಿಕ್ಕ ಚಿತ್ರ
ಗುರುವಾರದ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸೆರೆ ಸಿಕ್ಕ ಚಿತ್ರ   

ಬೆಂಗಳೂರು: ವಿಧಾನಸಭೆಯಲ್ಲಿ ಎರಡನೇ ದಿನದ ಕಲಾಪಶುಕ್ರವಾರ ಆರಂಭವಾಗಿದ್ದು, ಕಲಾಪದಿಂದ ಶಾಸಕ ಬಿ.ಕೆ.ಸಂಗಮೇಶ್ವರ್ ಅಮಾನತು ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

‘ಒಂದು ರಾಷ್ಟ್ರ– ಒಂದು ಚುನಾವಣೆ’ ಚರ್ಚೆಗೆ ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದ್ದಾರೆ.

‘ಸಂಗಮೇಶ್ವರ್ ಆಕ್ರೋಶದಲ್ಲಿ ಅಂಗಿ ಬಿಚ್ಚಿದರೇ ಹೊರತು ಬೆತ್ತಲೆ ಆಗಲಿಲ್ಲ. ಅವರ ಅಮಾನತು ವಾಪಸ್ ತೆಗೆದುಕೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ವಿಧಾನಸಭಾಧ್ಯಕ್ಷ ಕಾಗೇರಿ ಅವರನ್ನು ಒತ್ತಾಯಿಸಿದರು.

ADVERTISEMENT

ಒಂದು ರಾಷ್ಟ್ರ–ಒಂದು ಚುನಾವಣೆ ಚರ್ಚೆ ಆರಂಭಿಸಿರುವ ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, '1967ರ ವರೆಗೂ ಒಂದು ರಾಷ್ಟ್ರ–ಒಂದು ಚುನಾವಣೆ ಪ್ರಕ್ರಿಯೆಯೇ ಇತ್ತು. ಆದರೆ, ಕಾಂಗ್ರೆಸ್‌ ಏಳು ರಾಜ್ಯಗಳ ಸರ್ಕಾರ ವಿಸರ್ಜನೆ ಮಾಡಿತು. ಅಲ್ಲಿಂದ ಒಂದೊಂದೆ ರಾಜ್ಯಗಳ ಚುವಾವಣೆ ಆರಂಭವಾಯಿತು' ಎಂದು ಹಿಂದಿನ ಚುನಾವಣೆ ಪ್ರಕ್ರಿಯೆ ಬಗ್ಗೆ ವಿವರಿಸಿದರು.

ಗದ್ದಲದ ನಡುವೆಯೂ ಬೊಮ್ಮಾಯಿ ಮಾತು ಮುಂದುವರಿಸಿದರೆ, ಕಾಂಗ್ರೆಸ್ ಶಾಸಕರು ಕೂಗು ಜೋರು ಮಾಡಿದರು. ಗೊಂದಲದ ವಾತಾವರಣ ಮುಂದುವರಿದಿದ್ದರಿಂದ ವಿಧಾನಸಭಾಧ್ಯಕ್ಷರಾದ ಕಾಗೇರಿ ಮತ್ತೆ ಸದನವನ್ನು ಮುಂದೂಡಿದರು.

ಅಧಿವೇಶನದ ನೇರ ಪ್ರಸಾರ–

‘ಅವರ ಕ್ಷೇತ್ರದಲ್ಲಿ ದಾಖಲಾಗಿರುವ ಪೊಲೀಸ್ ಪ್ರಕರಣಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತ, ಸದನದಲ್ಲಿ ಬಟ್ಟೆ ಬಿಚ್ಚಿದ್ದು ಸರಿಯಲ್ಲ. ದುರ್ವತೆಯನ್ನು ಕಾಂಗ್ರೆಸ್ ಮುಖಂಡರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಸಚಿನ ಬಸವರಾಜ ಬೊಮ್ಮಾಯಿ ಹೇಳಿದರು.

ಅಧಿವೇಶನದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆಯ ಬಗ್ಗೆ ಚರ್ಚೆಗಾಗಿ ಕರೆಯಲಾಗಿದೆ. ಶಾಸಕರ ಹಕ್ಕು ಮೊಟಕು ಆಗಬಾರದು ಎಂದು ವಿಧಾನಸಭಾಧ್ಯಕ್ಷರುಕಾಗೇರಿ ತಿಳಿ ಹೇಳಿದರು.

ಇದೇ ವೇಳೆ, 'ನಿಮ್ಮ ಆರ್‌ಎಸ್‌ಎಸ್ ಅಜೆಂಡಾವನ್ನು ನಾವು ಇಲ್ಲಿ ಚರ್ಚಿಸುವುದಿಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿರೋಧ ಪಕ್ಷದ ಶಾಸಕರು ಧರಣಿ ಕೈಬಿಡಿದ ಕಾರಣಕ್ಕೆ ಸದನವನ್ನು 12 ಗಂಟೆಯವರೆಗೂ ಮುಂದೂಡಿಕೆ ಮಾಡಲಾಗಿದೆ.

ಅಧಿವೇಶನದ ನೇರ ಪ್ರಸಾರ–

ಧಿಕ್ಕಾರ, ಕೂಗಾಟ, ಕಲಾಪ ಮುಂದೂಡಿಕೆ, ಮತ್ತೆ ಆರಂಭ, ಸಭಾತ್ಯಾಗದ ವಿದ್ಯಮಾನಗಳು ಪದೇ ಪದೇ ನಡೆದಿದ್ದರಿಂದ ವಿಧಾನಸಭೆಯಲ್ಲಿ ಮೊದಲ ದಿನವಾದಗುರುವಾರ ಸಹ ಕಲಾಪ ನಡೆಯಲಿಲ್ಲ. ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ವಿಶೇಷ ಚರ್ಚೆ ನಡೆಸುವುದನ್ನು ವಿರೋಧಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲೂ ಕಾಂಗ್ರೆಸ್‌ ಪಕ್ಷ ಧರಣಿ ನಡೆಸಿತ್ತು.

ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಅಂಗಿ ಬಿಚ್ಚಿ ಪ್ರತಿಭಟನೆ ತೋರಿದ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್ವರ ಅವರನ್ನು ಸದನದಿಂದ ಒಂದು ವಾರ ಅಮಾನತು ಮಾಡಿರುವುದು ಕೋಲಾಹಲಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.