ಲಂಡನ್: ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿಯ ನಡುವೆ ಮಹಾತ್ಮ ಗಾಂಧಿಯವರ ಅಹಿಂಸಾ ತತ್ವವು ಹೆಚ್ಚು ಪ್ರಸುತ್ತ ಎನ್ನಿಸುತ್ತದೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
'ಆಪರೇಷನ್ ಸಿಂಧೂರ'ದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿರುವ ಸರ್ವ ಪಕ್ಷಗಳ ನಿಯೋಗದ ಒಂದು ತಂಡವು ಯುರೋಪ್ಗೆ ತಲುಪಿದೆ.
ಲಂಡನ್ನ ಟ್ಯಾವಿಸ್ಟಾಕ್ ಸ್ಕ್ವೇರ್ನಲ್ಲಿರುವ ಮಹಾತ್ಮ ಗಾಂಧಿಯವರ ಬೃಹತ್ ಪ್ರತಿಮೆಗೆ ಹೂವು ಅರ್ಪಿಸಿ ಗೌರವ ಸಲ್ಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ‘ಮಹಾತ್ಮ ಗಾಂಧಿಯವರ ಸತ್ಯ, ಸೌಹಾರ್ದತೆ, ಸದ್ಭಾವನೆ, ಅಹಿಂಸೆ ತತ್ವಗಳು ಹೆಚ್ಚು ಪ್ರಸ್ತುತವಾಗಿದೆ. ಇತ್ತೀಚಿನ ಭಯೋತ್ಪಾದನೆಯ ಯುಗದಲ್ಲಿ, ಗಾಂಧಿ ಅವರ ಸಂದೇಶವೂ ಅಷ್ಟೇ ಮಹತ್ವವನ್ನು ಹೊಂದಿದೆ ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತ ಬಲಿಷ್ಠವಾಗಿದೆ ಹಾಗೂ ಅಭಿವೃದ್ಧಿಯತ್ತ ಸಾಗುತ್ತಿದೆ. ಪಾಕ್ ಮತ್ತು ಭಯೋತ್ಪಾದಕರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕವೇ ನಾವು ಬದುಕುತ್ತಿದ್ದೇವೆ. ಅದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ, ಹೋರಾಡುತ್ತಿದ್ದೇವೆ. ನ್ಯಾಯ ಮತ್ತು ಸಮಾನತೆಯ ಕಲ್ಪನೆಯು ಕೇವಲ ಮಾತಿನಲ್ಲಿ ಅಲ್ಲ, ನಿಜವಾಗಿ ಪ್ರಸ್ತುತ ಪಡಿಸುವುದಾಗಿದೆ ಎಂದು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
ಪ್ರಸಾದ್ ನೇತೃತ್ವದ ಬಹುಪಕ್ಷ ನಿಯೋಗವು ಸದ್ಯ ಯುರೋಪ್ನಲ್ಲಿದ್ದು, ಸಂಸದರಾದ ಪುರಂದೇಶ್ವರಿ, ಚತುರ್ವೇದಿ, ಗುಲಾಮ್ ಅಲಿ ಖತಾನಾ, ಅಮರ್ ಸಿಂಗ್, ಸಮಿಕ್ ಭಟ್ಟಾಚಾರ್ಯ, ಎಂ. ತಂಬಿದುರೈ ಜೊತೆಗೆ ಅಕ್ಬರ್ ಮತ್ತು ರಾಯಭಾರಿ ಸರನ್ ಅವರನ್ನು ಒಳಗೊಂಡ ನಿಯೋಗದ ಪ್ರವಾಸವು ಮಂಗಳವಾರ ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ನಂತರ ಭಾರತವು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ತೆರೆದಿಡಲು ರಾಜತಾಂತ್ರಿಕ ಕಾರ್ಯಾಚರಣೆಯ ಹೆಜ್ಜೆ ಇರಿಸಿ, ಇದಕ್ಕಾಗಿ ಸರ್ವ ಪಕ್ಷಗಳ ಸಂಸದರ ನೇತೃತ್ವದಲ್ಲಿ ನಿಯೋಗಗಳನ್ನು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಕಳುಹಿಸಿಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.