ಭಾರತ ಹಾಗೂ ಪಾಕಿಸ್ತಾನ ತಂಡದ ನಾಯಕರು
ಚಿತ್ರ: @CSyncing
ಕೊಲೊಂಬೊ: ಟಿ20 ವಿಶ್ವಕಪ್ನ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯದಲ್ಲಿ ಕೂಡ ಉಭಯ ತಂಡಗಳ ನಡುವಿನ ಹಸ್ತಲಾಘವದ ಪ್ರಹಸನ ಮುಂದುವರಿದಿದೆ.
ದುಬೈನಲ್ಲಿ ಮುಕ್ತಾಯಗೊಂಡ 2025ರ ಏಷ್ಯಾಕಪ್ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಸ್ತಲಾಘವ ವಿವಾದ ಉಂಟಾಗಿತ್ತು. ಉಭಯ ತಂಡದ ಆಟಗಾರರು, ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಅದೇ, ವಿವಾದ ಟಿ20 ವಿಶ್ವಕಪ್ನಲ್ಲೂ ಮುಂದುವರಿದಿದೆ.
ಹೌದು, ಟಾಸ್ ಸಂದರ್ಭದಲ್ಲಿ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಹಸ್ತಲಾಘವ ಮಾಡಿಲ್ಲ. ಆ ಮೂಲಕ ಏಷ್ಯಾಕಪ್ ವೇಳೆ ಮಾಡಿದ್ದನ್ನೇ ಪುನರಾವರ್ತಿಸಿದ್ದಾರೆ.
‘ಉಭಯ ತಂಡಗಳ ನಡುವೆ ಹಸ್ತಲಾಘವ ಇರುವುದಿಲ್ಲ’ ಎಂದು ಪಂದ್ಯದ ಆರಂಭಕ್ಕೆ ಕೇವಲ ಒಂದು ಗಂಟೆ ಮೊದಲು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದರು.
ಪಾಕಿಸ್ತಾನ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕವೂ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ನಡುವೆ ಹಸ್ತಲಾಘವ ಇರುವುದಿಲ್ಲ ಎಂದು ತಿಳಿದು ಬಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಗೌರವ ಸಲ್ಲಿಸುವ ಮತ್ತು ಆಪರೇಷನ್ ಸಿಂಧೂರ ನಂತರ ಭಾರತೀಯ ಸೇನೆ ಜೊತೆಗಿನ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಈ ನಡೆ ಅನುಸರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.