ADVERTISEMENT

ಪಂದ್ಯ ಗೆಲ್ಲಿಸಿಕೊಟ್ಟ ಪಾಂಡ್ಯಗೆ ಶಿರಬಾಗಿ ನಮಿಸಿದ ಡಿಕೆ: ವಿಡಿಯೊ ವೈರಲ್‌ 

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 1:50 IST
Last Updated 29 ಆಗಸ್ಟ್ 2022, 1:50 IST
ಪಾಂಡ್ಯಾಗೆ ನಮಿಸುತ್ತಿರುವ ದಿನೇಶ್‌ ಕಾರ್ತಿಕ್‌
ಪಾಂಡ್ಯಾಗೆ ನಮಿಸುತ್ತಿರುವ ದಿನೇಶ್‌ ಕಾರ್ತಿಕ್‌   

ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಲ್‌ರೌಂಡರ್‌ ಆಟದ ಮೂಲಕ ಗೆಲ್ಲಿಸಿಕೊಟ್ಟ ಹಾರ್ದಿಕ್‌ ಪಂಡ್ಯಾ ಅವರಿಗೆ ದಿನೇಶ್‌ ಕಾರ್ತಿಕ್‌ ಅವರು ಪಂದ್ಯದ ಕೊನೆಯಲ್ಲಿ ಗೌರವ ಅರ್ಪಿಸಿದ ರೀತಿ ಕ್ರಿಕೆಟ್‌ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ವೈರಲ್‌ ಆಗಿದ್ದು, #DineshKarthik ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್‌ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌ ತಂಡ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 19.4 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟದೊಂದಿಗೆ ಯಶಸ್ವಿಯಾಗಿ ಗುರಿಮುಟ್ಟಿತು. ರೋಚಕ ಪಂದ್ಯದಲ್ಲಿ ಗೆದ್ದ ಭಾರತ ಏಷ್ಯಾ ಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮೂರು ವಿಕೆಟ್‌ ಮತ್ತು 17 ಬಾಲ್‌ಗಳಿಂದ ಅಜೇಯ 33 ರನ್‌ ಗಳಿಸಿದ ಹಾರ್ದಿಕ್‌ ಪಾಂಡ್ಯ ಪಂದ್ಯಶ್ರೇಷ್ಠರೆನಿಸಿದರು.

ಆದರೆ, ಪಂದ್ಯವು ಕೊನೆ ಓವರ್‌ ವರೆಗೆ ಕುತೂಹಲ ಉಳಿಸಿಕೊಂಡಿದ್ದು ವಿಶೇಷ. ಒಂದು ಹಂತದಲ್ಲಿ ಭಾರತಕ್ಕೆ ಗೆಲ್ಲಲು ಮೂರು ಎಸೆತಗಳಲ್ಲಿ ಆರು ರನ್‌ ಬೇಕಿತ್ತು. ಆಗ ಸ್ಟ್ರೈಕ್‌ನಲ್ಲಿದ್ದ ಪಾಂಡ್ಯ ಚೆಂಡನ್ನು ಸಿಕ್ಸರ್‌ ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ADVERTISEMENT

ಭಾರತ ಗೆಲ್ಲುತ್ತಲೇ ಪಾಂಡ್ಯ ಬಳಿಗೆ ತೆರಳಿದ ದಿನೇಶ್‌ ಕಾರ್ತಿಕ್‌, ಶಿರಬಾಗಿ ನಮಿಸಿದರು. ಈ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

‘ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವಾದ ಪಾಂಡ್ಯ ಅವರ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ. ಭಾರತೀಯರ ಭಾವನೆಯನ್ನು ದಿನೇಶ್‌ ಅವರು ಪಾಂಡ್ಯಗೆ ಅರ್ಪಿಸಿದ್ದಾರೆ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.