ಶುಭಮನ್ ಗಿಲ್
ಬೆಂಗಳೂರು: ಕರ್ನಾಟಕ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿರುವ ಪಂಜಾಬ್ ತಂಡದ ನಾಯಕ ಶುಭಮನ್ ಗಿಲ್, ಅಮೋಘ ಶತಕದ ಸಾಧನೆ ಮಾಡಿದ್ದಾರೆ.
ಆ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕದ ಗೆಲುವನ್ನು ವಿಳಂಬಗೊಳಿಸಿದ್ದಾರೆ. ಕರ್ನಾಟಕದ ಗೆಲುವಿಗೆ ಮೂರು ವಿಕೆಟ್ಗಳ ಅವಶ್ಯಕತೆಯಿದೆ.
ಪಂಜಾಬ್ನ 55 ರನ್ಗಳಿಗೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ ಸ್ಮರಣ್ ರವಿಚಂದ್ರನ್ ದ್ವಿಶತಕದ (203) ಬಲದಿಂದ 475 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 320 ರನ್ಗಳ ಬೃಹತ್ ಮುನ್ನಡೆ ಗಳಿಸಿತ್ತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಪಂಜಾಬ್ ಎರಡನೇ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಸಂಕಷ್ಟದಲ್ಲಿತ್ತು.
ಇಂದು (ಶನಿವಾರ) ಕೂಡ ಪಂಜಾಬ್ ಬ್ಯಾಟರ್ಗಳಿಗೆ ಕರ್ನಾಟಕದ ಬೌಲರ್ಗಳು ಕಾಡಿದರು. ಆದರೆ ವಿಕೆಟ್ನ ಮತ್ತೊಂದು ತುದಿಯಿಂದ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಶತಕದ ಸಾಧನೆ ಮಾಡಿದರು.
ತಾಜಾ ವರದಿಯ ವೇಳೆಗೆ ಪಂಜಾಬ್ ಏಳು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ. ಗಿಲ್ 101 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಕರ್ನಾಟಕದ ಪರ ಯಶೋವರ್ಧನ್ ಮೂರು ಹಾಗೂ ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಗಳಿಸಿದ್ದಾರೆ.
ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಪಂಜಾಬ್ ಇನ್ನೂ 235 ರನ್ ಗಳಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.