ADVERTISEMENT

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್

ಪಿಟಿಐ
Published 26 ಡಿಸೆಂಬರ್ 2023, 14:56 IST
Last Updated 26 ಡಿಸೆಂಬರ್ 2023, 14:56 IST
<div class="paragraphs"><p>ವಿನೇಶಾ ಪೋಗಟ್</p></div>

ವಿನೇಶಾ ಪೋಗಟ್

   

ಪಿಟಿಐ ಚಿತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ  ಸಂಜಯ್ ಸಿಂಗ್‌ ಆಯ್ಕೆಯನ್ನು ಪ್ರತಿಭಟಿಸಿರುವ ಕುಸ್ತಿ ಪಟು ವಿನೇಶಾ ಫೋಗಟ್‌ ಅವು ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತೆ ವಿನೇಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ADVERTISEMENT

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಡೆಫ್‌ಲಿಂಪಿಕ್ಸ್‌ ಚಾಂಪಿಯನ್‌ ವಿರೇಂದರ್‌ ಸಿಂಗ್‌ ಯಾದವ್‌ ಅವರು ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ವಾಪಸು ಮಾಡಿದ ಬೆನ್ನಲ್ಲೇ ವಿನೇಶಾ ಅವರ ನಿರ್ಧಾರ ಪ್ರಕಟವಾಗಿದೆ.

‘ಮೇಜರ್‌ ಧ್ಯಾನಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ನಾನು ಹಿಂತಿರುಗಿಸುತ್ತಿದ್ದೇನೆ’ ಎಂದು ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪತ್ರದಲ್ಲಿ ವಿನೇಶಾ ತಿಳಿಸಿದ್ದಾರೆ.

ಕಳೆದ ಗುರುವಾರ ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಫೆಡರೇಷನ್‌ನ 15 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಬ್ರಿಜ್‌ ಭೂಷಣ್ ಬೆಂಬಲಿಗರು ಗೆದ್ದುಕೊಂಡಿದ್ದರು. ಬಜರಂಗ್‌, ವಿನೇಶಾ, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿ ಪೈಲ್ವಾನರು, ಬ್ರಿಜ್‌ ಭೂಷಣ್ ಆಪ್ತರಿಗೆ ಫೆಡರೇಷನ್‌ನಲ್ಲಿ ಸ್ಥಾನ ನೀಡಬಾರದು ಎಂದು ಆಗ್ರಹಿಸಿದ್ದರು.

ಅಧ್ಯಕ್ಷರಾಗಿ ಸಂಜಯ್ ಆಯ್ಕೆಯಾದ ಬೆನ್ನಲ್ಲೇ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಕ್ರೀಡಾ ಸಚಿವಾಲಯವು ನಿಯಮ ಉಲ್ಲಂಘನೆ ಕಾರಣಕ್ಕೆ ನೂತನ ಆಡಳಿತಸಮಿತಿಯನ್ನು ಅಮಾನತು ಮಾಡಿತ್ತು. ನೀತಿ ನಿಯಮಗಳನ್ನು ಪಾಲಿಸದೇ ಮತ್ತು ಕುಸ್ತಿಪಟುಗಳಿಗೆ ಕಾಲಾವಕಾಶ ನೀಡದೇ ಆತುರದಿಂದ 15 ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳ ದಿನಾಂಕ ಘೋಷಣೆ ಮಾಡಿರುವುದಕ್ಕೆ ಸಚಿವಾಲಯ ಕ್ರಮ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.