ನವದೆಹಲಿ: ಕಳೆದ ಒಂದು ತಿಂಗಳಿನಿಂದ ಒಡಿಶಾ ರಾಜ್ಯದಾದ್ಯಂತ ಸೂರ್ಯದೇವ ರಣ ಭೀಕರ ಬಿಸಿಲು ನೀಡುತ್ತಿದ್ದಾನೆ. ಬಿರು ಬಿಸಿಲಿನ ಅಬ್ಬರಕ್ಕೆ ನಾಗರಿಕರು ತತ್ತರಿಸಿ ಹೋಗಿದ್ದಾರೆ.
ಒಡಿಶಾದಲ್ಲಿ ಪ್ರತಿನಿತ್ಯ 40ರಿಂದ 44 ಡಿಗ್ರಿವರೆಗೂ ತಾಪಮಾನ ದಾಖಲಾಗುತ್ತಿದೆ. ವೃದ್ಧರ ಮತ್ತು ಮಕ್ಕಳ ಪಾಡು ದೇವರೇ ಬಲ್ಲ. ಫ್ಯಾನ್ ಗಾಳಿಯೂ ಬಿಸಿಯಾಗಿ ಬರುತ್ತಿದೆ.
ತಾಪಮಾನ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅನೇಕರು ಮನೆಯ ಹೊರಗೆ ರೊಟ್ಟಿ, ದೋಸೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಬಿಸಿಲಲ್ಲಿ ಬೇಯಿಸಿಕೊಳ್ಳುತ್ತಿದ್ದಾರೆ. ಅನೇಕರು ಇಂತಹ ಹಾಸ್ಯಮಯ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ನೀಲಮಧಬ್ ಪಾಂಡಾ ಎಂಬುವರು ಟ್ವಿಟರ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ರೊಟ್ಟಿಗಳನ್ನು ತಯಾರಿಸುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದು ನಿಮಿಷದ ಈ ವಿಡಿಯೊವನ್ನು 60 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಅನೇಕರು ಕಾಮೆಂಟ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
‘ನನ್ನ ಪ್ರಕಾರ ಮಾರುಕಟ್ಟೆಗೆ ಸೋಲಾರ್ ಕುಕ್ಕರ್ ಅನ್ನು ಪರಿಚಯಿಸುವುದು ಉತ್ತಮ. ಸುಡುವ ಬಿಸಿಲಿನಲ್ಲಿ ಕೆಲವೇ ನಿಮಿಷಗಳಲ್ಲಿ ಅಡುಗೆ ತಯಾರಿಸಬಹುದು’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಣಿಪುರದ ಹವಾಮಾನ ಇಲಾಖೆಯ ಉದ್ಯೋಗಿ ಲಿಸಿಪ್ರಿಯಾ ಕಂಗುಜಾಮ್ ಕೂಕೂಡ ವಿಡಿಯೊಗೆ ಪ್ರತಿಕ್ರಿಯಿಸಿದ್ದು ‘ಅಭಿನಂದನೆಗಳು ಭಾರತ! ಅಂತಿಮವಾಗಿ, ನಾವು ಕಾರಿನ ಬಾನೆಟ್ ಮೇಲೆ ರೊಟ್ಟಿ ಮಾಡಬಹುದು’ ಎಂದು ಬರೆದುಕೊಂಡಿದ್ದಾರೆ.
ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.