
ಡಿಕೆಶಿ, ತೇಜಸ್ವಿ ಸೂರ್ಯ
ಬೆಂಗಳೂರು: ‘ಆ ಹುಡುಗ ಇನ್ನೂ ಎಳಸು. ಆತನಿಗೆ ಅನುಭವವಿಲ್ಲ. ಗೌರವ ಕೊಟ್ಟು ಕರೆದು ಮಾತನಾಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ’ ಎಂದು ಸಂಸದ ತೇಜಸ್ವಿಸೂರ್ಯ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಸುರಂಗ ರಸ್ತೆ ಬೇಡ ಎಂದು ಹೇಳುವುದಕ್ಕೆ ತೇಜಸ್ವಿ ಸೂರ್ಯ ಯಾರು? ಈ ದೇಶದಲ್ಲಿ, ಪ್ರಪಂಚದಲ್ಲಿ ಸುರಂಗ ರಸ್ತೆಗಳೇ ಬೇಡ ಎಂದು ಅವನು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನಿಸಲಿ’ ಎಂದು ಕಿಡಿಕಾರಿದರು.
‘ತಂತ್ರಜ್ಞರ ಅಭಿಪ್ರಾಯ ಪಡೆದು ಸುರಂಗ ರಸ್ತೆ ಯೋಜನೆ ಮಾಡಬೇಕಿತ್ತು’ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್, ‘ಗೌರವ ಕೊಟ್ಟು ನನ್ನ ಜೊತೆ ಮಾತನಾಡಲು ಅವಕಾಶ ನೀಡಿದರೆ ಏನೇನೊ ಮಾತನಾಡುತ್ತಿದ್ದಾನೆ. ಅವನಿಗೆ ಪ್ರಪಂಚ ಹೇಗಿದೆ ಎಂದೇ ಗೊತ್ತಿಲ್ಲ’ ಎಂದರು.
ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ?: ‘ಹುಡುಗನ ಬಳಿ ಕಾರು ಇಲ್ಲದಿದ್ದರೆ ಹೆಣ್ಣು ನೀಡುವುದಿಲ್ಲ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಮಾತನಾಡುತ್ತಿದ್ದಾರೆ. ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೊ, ಸರ್ಕಾರಿ ಬಸ್ ಬಳಸಲಿ. ಅವನ ಪಕ್ಷದ ಶಾಸಕರು ಮೆಟ್ರೊ, ಆಟೊ ರಿಕ್ಷಾ, ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡಲಿ. ಬೆಂಗಳೂರಿನಲ್ಲಿ 1.30 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ಆತ ಅರ್ಥ ಮಾಡಿಕೊಳ್ಳಬೇಕು. ಅವರಿಗೆಲ್ಲ ವಾಹನ ಬಳಸಬೇಡಿ ಎಂದು ಹೇಳಲು ಆಗುತ್ತದೆಯೇ’ ಎಂದರು.
‘ಈ ರಾಜ್ಯಕ್ಕೆ ಮೆಟ್ರೊ ತಂದವರು ನಾವು (ಕಾಂಗ್ರೆಸ್). ಅವರು (ಬಿಜೆಪಿಯವರು) ಕೇಂದ್ರದಿಂದ ರಾಜ್ಯಕ್ಕೆ ಏನು ತೆಗೆದುಕೊಂಡು ಬಂದಿದ್ದಾರೆ? ಬೆಂಗಳೂರಲ್ಲಿ ಎಷ್ಟು ಪಿಲ್ಲರ್ ಹಾಕಿದ್ದಾರೆ? ಯೋಜನೆಗೆ ಹಣವೆಷ್ಟು ತಂದಿದ್ದಾರೆ? ಕೇಂದ್ರ ಸರ್ಕಾರ ಮೆಟ್ರೊ ಯೋಜನೆಗೆ ಶೇ 11ರಿಂದ 12ರಷ್ಟು ಹಣ ನೀಡುತ್ತಿದೆ. ಭೂ ಪರಿಹಾರ ಸೇರಿದಂತೆ ಎಲ್ಲವನ್ನೂ ನಾವೇ ನೀಡುತ್ತಿದ್ದೇವೆ’ ಎಂದರು.
‘ತೇಜಸ್ವಿ ಸೂರ್ಯ ವೇಸ್ಟ್ ಮೆಟೀರಿಯಲ್. ಖಾಲಿ ಟ್ರಂಕ್. ಅವರ ಪಕ್ಷದ ನಾಯಕರಾದ ಆರ್. ಅಶೋಕ, ಸಿ.ಎನ್. ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಮಾತನಾಡಿದರೆ ಉತ್ತರ ನೀಡೋಣ. ಅವರಿಗೆ ಇದೆಲ್ಲವೂ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಬಿಆರ್ಟಿಎಸ್ ಮಾಡಲು ಎಲ್ಲಿ ಜಾಗವಿದೆ? ಭೂ ಪರಿಹಾರ ಎಷ್ಟಾಗುತ್ತದೆ ಎನ್ನುವ ಅರಿವು ಅವನ ತಲೆಯಲ್ಲಿಯೇ ಇಲ್ಲ’ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.