ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಹಿಂದೂಗಳನ್ನು ಪ್ರಚೋದಿಸಲು ನಗರದ ಪ್ರಮುಖ ಭಾಗಗಳಲ್ಲಿ ಔರಂಗಜೇಬ್, ಟಿಪ್ಪು ಸುಲ್ತಾನ್, ಹೈದರಾಲಿಯ ಕಟೌಟ್ಗಳನ್ನು ಹಾಕಲಾಗಿದೆ. ಅದಕ್ಕೆ ಹಿಂದೂ ಸಮಾಜ ಎಂದೂ ಹೆದರಿಲ್ಲ. ಮುಂದೆಯೂ ಹೆದರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
‘ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಗುಲಾಮ ಆಗಿದೆ. ಶಿವಮೊಗ್ಗದಲ್ಲಿ ಪೊಲೀಸರು ಸರ್ಕಾರಕ್ಕೆ ಹೆದರಿ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗೃಹ ಸಚಿವ ಜಿ. ಪರಮೇಶ್ವರ್ ಅವರು ‘ಶಿವಮೊಗ್ಗದಲ್ಲಿ ನಡೆದಿರುವುದು ಚಿಕ್ಕ ಘಟನೆ. ತಲ್ವಾರ್ ಹಿಡಿದು ಯಾರೂ ಮೆರವಣಿಗೆ ನಡೆಸಿಲ್ಲ’ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಮುಸ್ಲಿಮರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಎರಡೂ ಧರ್ಮಗಳ ಧಾರ್ಮಿಕ ಕಾರ್ಯಕ್ರಮ ನಡೆದಿವೆ. ಸೆ.28ರಂದು ಹಿಂದೂ ಮಹಾಸಭಾ ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಲಕ್ಷಾಂತರ ಜನರನ್ನೊಳಗೊಂಡು ಶಾಂತಿ ರೀತಿಯಲ್ಲಿ ಅದ್ದೂರಿಯಾಗಿ ಜರುಗಿತು. ಆದರೆ, ಅ.1ರಂದು ನಡೆದ ಮುಸ್ಲಿಮರ ಮೆರವಣಿಗೆಯ ರೀತಿಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಮೆರವಣಿಗೆ ಮೇಳೆ ಕೈಯಲ್ಲಿ ತಲ್ವಾರ್ ಹಿಡಿದು ಸಾಗಿ ಯಾರಿಗೆ ಎಚ್ಚರಿಕೆ ನೀಡುತ್ತಿದ್ದಾರೆ? ಹಿಂದೂ ಸಮಾಜಕ್ಕೆ ಎಚ್ಚರಿಕೆ ನೀಡುವುದಾ ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ದೊಡ್ಡ ಗಾತ್ರದ ತಲ್ವಾರ್ಗಳನ್ನು ತೂಗು ಹಾಕಲಾಗಿದೆ. ಕೋಲಾರ ಜಿಲ್ಲೆಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಅದರ ಅರಿವಿದ್ದರೂ ಪೊಲೀಸರು ಇಲ್ಲಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ನಗರದಾದ್ಯಂತ 144 ಸೆಕ್ಸನ್ ಜಾರಿಗೊಳಿಸಲಾಗಿದೆ. ಇದರಿಂದ ಬಡವರ ವ್ಯಾಪಾರ–ವಹಿವಾಟಿಗೆ ಸಮಸ್ಯೆ ಆಗಿದೆ. ಕೂಡಲೇ ಸೆಕ್ಸನ್ ತೆರವುಗೊಳಿಸಿ, ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.