
ಪ್ರಜಾವಾಣಿ ವಾರ್ತೆಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವೃತ್ತದ ಕಾಡಂಚಿನ ಅಡಿಕೆ ತೋಟ, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ. ಆದರೆ ಈ ಉರುಳಿಗೆ ಕರಡಿ ಹಾಗೂ ಚಿರತೆಗಳು ಸಿಲುಕಿ ಸಾಯುತ್ತಿವೆ. ಕಳೆದ ಏಳು ತಿಂಗಳಲ್ಲಿ 11 ಕಡೆ ಕರಡಿಗಳು ಉರುಳಿಗೆ ಸಿಲುಕಿವೆ. ಅದರಲ್ಲಿ ಮೂರು ಕರಡಿ ಹಾಗೂ ಎರಡು ಚಿರತೆ ಸಾವನ್ನಪ್ಪಿವೆ. ಒಂದು ಕರಡಿ ಕಾಲು ಕಳೆದುಕೊಂಡಿದೆ. ಇದು ವನ್ಯಜೀವಿ ಆಸಕ್ತರ ಆತಂಕಕ್ಕೂ ಕಾರಣವಾಗಿದೆ. ಉರುಳಿನಿಂದ ಕರಡಿಗಳನ್ನು ರಕ್ಷಿಸುವಲ್ಲಿ, ಅಂತಹ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯುವಲ್ಲಿ ಯಾರಿಗೂ ಆಸಕ್ತಿಯೇ ಇಲ್ಲ. ಕಳ್ಳಬೇಟೆಗಾರರ ವಿರುದ್ಧ ಗಂಭೀರ ಕ್ರಮಕ್ಕೂ ಇಲಾಖೆ ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.