ADVERTISEMENT

ಅವಹೇಳನಕಾರಿ ಹೇಳಿಕೆ: BJP ನಾಯಕ ದಿಲೀಪ್ ಘೋಷ್, ‘ಕೈ’ನಾಯಕಿ ಸುಪ್ರಿಯಾಗೆ EC ತರಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2024, 10:08 IST
Last Updated 1 ಏಪ್ರಿಲ್ 2024, 10:08 IST
<div class="paragraphs"><p>ಸುಪ್ರಿಯಾ ಶ್ರೀನೇತ್ ಮತ್ತು ದಿಲೀಪ್ ಘೋಷ್</p></div>

ಸುಪ್ರಿಯಾ ಶ್ರೀನೇತ್ ಮತ್ತು ದಿಲೀಪ್ ಘೋಷ್

   

ನವದೆಹಲಿ: ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿ ಸಂಸದ, ಹಿರಿಯ ನಾಯಕ ದಿಲೀಪ್ ಘೋಷ್ ಹಾಗೂ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರೆ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ದಿಲೀಪ್ ಘೋಷ್ ಮತ್ತು ಸುಪ್ರಿಯಾ ಶ್ರೀನೇತ್ ವಿರುದ್ಧ ಸಲ್ಲಿಕೆಯಾಗಿದ್ದ ದೂರುಗಳ ಕುರಿತು ಚುನಾವಣಾ ಆಯೋಗವು ಇಂದು (ಸೋಮವಾರ) ಮೇಲ್ವಿಚಾರಣೆ ನಡೆಸಿದೆ.

ADVERTISEMENT

ದಿಲೀಪ್ ಘೋಷ್ ಹಾಗೂ ಸುಪ್ರಿಯಾ ಶ್ರೀನೇತ್ ಅವರು ಕೀಳು ಮಟ್ಟದ ವೈಯಕ್ತಿಕ ದಾಳಿ ಹಾಗೂ ಮಹಿಳೆಯರ ಘನತೆಗೆ ಕುಂದು ತರುವಂತೆ ಮಾತನಾಡುವ ಮೂಲಕ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ಆಯೋಗ ಹೇಳಿದೆ.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ರಾಜಕೀಯ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಚುನಾವಣಾ ಆಯೋಗ ಕಿವಿಮಾತು ಹೇಳಿದೆ.

ಬಿಜೆಪಿ ಹಿರಿಯ ನಾಯಕ ದಿಲೀಪ್‌ ಘೋಷ್‌ ಅವರು ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೌಟುಂಬಿಕ ಹಿನ್ನೆಲೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಬಳಿಕ ಕ್ಷಮೆಯಾಚಿಸಿದ್ದರು.

ಇತ್ತ ಸುಪ್ರಿಯಾ ಶ್ರೀನೇತ್ ಅವರು ಈಚೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಬಾಲಿವುಡ್‌ ನಟಿ ಕಂಗನಾ ರನೌತ್‌ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದಕ್ಕಾಗಿ ವಿವಾದಕ್ಕೀಡಾಗಿದ್ದರು. ಇದರಿಂದಾಗಿ ಅವರಿಗೆ ಲೋಕಸಭೆ ಚುನಾವಣೆಯ ಟಿಕೆಟ್‌ ಕೂಡ ಕೈತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.