ADVERTISEMENT

ಸಕ್ಕರೆ ಕಾಯಿಲೆಗೆ ರಾಮಬಾಣ ಮಯೂರಾಸನ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:38 IST
Last Updated 19 ಜೂನ್ 2019, 16:38 IST
ಮಯೂರಾಸನ
ಮಯೂರಾಸನ   

‘ನಾಟ್ಯ ಮಯೂರಿ’ ಹೆಸರಿನಲ್ಲಿರುವ ‘ಮಯೂರಾಸನ’ದ ಅಭ್ಯಾಸ ಕ್ರಮ ಹಾಗೂ ಪ್ರಯೋಜನಗಳ ವಿವರ ಇಲ್ಲಿದೆ. ಈ ಆಸನ ಸಕ್ಕರೆ ಕಾಯಿಲೆಯುಳ್ಳವರಿಗೆ ಚಿಕಿತ್ಸಾ ರೂಪದಲ್ಲಿ ರಾಮಬಾಣವಾಗಿದೆ.

ಶಿಷ್ಯ: ಗುರುಗಳೆ ಕಾಡಂಚಿನಲ್ಲಿ ಯಾವುದೋ ಪಕ್ಷಿಯ ಕೂಗು ಕೇಳುತ್ತಿದೆಯಲ್ಲಾ?

ಗುರು: ಕಾಡಿನಲ್ಲಿ ಹತ್ತಾರು ಬಗೆಯ ಹಕ್ಕಿಗಳಿವೆ. ಅಲ್ಲಿ ನೋಡಿ ನವಿಲು ನಾಟ್ಯವಾಡುತ್ತಿದೆ.

ADVERTISEMENT

ಶಿಷ್ಯ: ಅಬ್ಬ ಎಷ್ಟೊಂದು ಸುಂದರ! ಗರಿ ಬಿಚ್ಚಿ ಕುಣಿವ ಈ ನವಿಲಿಗೆ ನಾಟ್ಯವ ಕಲಿಸಿದವರಾರು?

ಗುರು: ತನ್ನ ಕುಟುಂಬ, ಬಳಗದ ಜತೆಗಿನ ಒಡನಾಡದಿಂದ ಪ್ರಕೃತಿ ಸಹಜವಾಗಿ ಕಲಿಯುತ್ತದೆ. ಎಲ್ಲದಕ್ಕೂ ಮೇಲಾಗಿ ಇದು ನಮ್ಮ ರಾಷ್ಟ್ರ ಪಕ್ಷಿ. ಇದಕ್ಕೆ ಮಯೂರ ಎಂಬ ಇನ್ನೊಂದು ಹೆಸರೂ ಇದೆ. ಇದನ್ನು ಹೋಲುವ ಮಯೂರಾಸನವೂ ಇದೆ.

ಅಭ್ಯಾಸ ಕ್ರಮ: ನೆಲಕ್ಕೆ ಮಂಡಿಯೂರಿ ಕುಳಿತುಕೊಳ್ಳಿ. ಮುಂದೆ ಭಾಗಿ ಎರಡೂ ಅಂಗೈಗಳನ್ನು ಹಿಮ್ಮುಖಮಾಡಿ(ಬೆರಳುಗಳು ಪಾದದತ್ತ ಮುಖ ಮಾಡಿರಲಿ) ನೆಲಕ್ಕೂರಿ. ಎರಡೂ ಮುಂದೋಳುಗಳನ್ನು ಕೂಡಿಸಿ ಮೊಳಕೈಗಳನ್ನು ಭಾಗಿಸಿ. ಮೊಳಕೈಮೇಲೆ ಹೊಟ್ಟೆಯು, ಹಿಂದೋಳಿನ ಮೇಲೆ ಎದೆಯನ್ನು ಒರಗಿಸಿ. ಮಂಡಿಯನ್ನು ನೆಲದಿಂದ ಬಿಡಿಸಿ ಕಾಲುಗಳನ್ನು ಒಂದೊಂದಾಗಿ ಹಿಂದಕ್ಕೆ ಚಾಚಿ. ತೊಡೆ, ಮಂಡಿ, ಪಾದಗಳನ್ನು ಜೋಡಿಸಿ ಸ್ವಲ್ಪ ಬಿಗಿಗೊಳಿಸಿ. ಉಸಿರನ್ನು ಹೊರಹಾಕಿ ಮುಂಗೈ ಮೇಲೆ ದೇಹದ ಭಾರ ಹಾಕುತ್ತಾ ಕಾಲುಗಳನ್ನು ನಿಧಾನವಾಗಿ ಮೇಲೆತ್ತಿ. ಕಾಲುಗಳು ಹಾಗೂ ದೇಹ ನೆಲಕ್ಕೆ ಸಮವಾಗಿ ಒಂದೇ ನೇರದಲ್ಲಿರುವಂತೆ ಸಮತೋಲನ ಕಾಯ್ದುಕೊಳ್ಳಿ. 30 ಸೆಕೆಂಡುಗಳಿಂದ 1 ನಿಮಿಷದ ವರೆಗೆ ಅಂತಿಮ ಸ್ಥಿತಿಯಲ್ಲಿ ನೆಲೆಸಿಸಿ.

ಫಲ: ಜೀರ್ಣಶಕ್ತಿ ವೃದ್ಧಿ. ಮಧುಮೂತ್ರ(ಸಕ್ಕರೆ ಕಾಯಿಲೆ) ಪೀಡಿತರಿಗೆ ಅತ್ಯಂತ ಫಲಕಾರಿ. ಕಿಬ್ಬೊಟ್ಟೆಯಲ್ಲಿನ ಆಯೋರ್ಟ ಎಂಬ ಶುದ್ಧ ರಕ್ತನಾಳವನ್ನು ಚಟುವಟಿಕೆಯಿಂದಿರಿಸಿ ಸರಾಗ ರಕ್ತ ಪರಿಚಲನೆಗೆ ಸಹಕಾರಿ. ಸಮತೋಲನ ಕಾಯುವುದರಿಂದ ತಾಳ್ಮೆ ವೃದ್ಧಿ.
ಸಾಧನೆಯ ಬಳಿಕ ಪದ್ಮ ಮಯೂರಾಸನ, ಏಕ ಹಸ್ತ ಮಯೂರಾಸನ ಅಭ್ಯಾಸ ಮುಂದುವರಿಸಬಹುದು.

ಕತ್ತು, ಭುಜ ನೋವು ನಿವಾರಕ ಹಲಾಸನ

'ಉಳುವ ಯೋಗಿಗಳ' ನೇಗಿಲ ಹೆಸರಿನಲ್ಲಿರುವ ‘ಹಲಾಸನ’ದ ಅಭ್ಯಾಸ ಕ್ರಮ ಹಾಗೂ ಪ್ರಯೋಜನಗಳ ವಿವರ ಇಲ್ಲಿದೆ.

ಶಿಷ್ಯ: ಗುರುಗಳೆ ನಿತ್ಯ ಇಲ್ಲಿಯೇ ಅಭ್ಯಾಸ ನಡೆಸುವುದರಿಂದ ಹೊಸತನ ಎನಿಸುತ್ತಿಲ್ಲ.

ಗುರು: ಹೌದು. ಹಾಗೆಯೇ ಒಂದು ಸುತ್ತು ಹೊರಗಿನ ಪರಿಸರಕ್ಕೆ ಹೋಗೋಣ. ಗಿಡ, ಮರ, ಬಳ್ಳಿ, ಶುದ್ಧಗಾಳಿ, ಬೆಳಕು, ನದಿ ನೀರಿನ ಜುಳು ಜುಳು ನಿನಾದ ಆಲಿಸುತ್ತಾ ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಕಲಿಯಬಹುದಲ್ಲವೇ? ನಿನ್ನದು ಒಳ್ಳೆ ಆಲೋಚನೆ.

ಶಿ: ಕಾಡು ಇನ್ನೂ ಎಷ್ಟು ದೂರವಿದೆ?

ಗು: ಅಗೋ ಅಲ್ಲಿ ಜಮೀನು ಕಾಣುತ್ತಿದೆಯಲ್ಲ ಅದನ್ನು ದಾಟಿ ತುಸು ದೂರ ನಡೆಯಬೇಕು.

ಶಿ: ಜಮೀನಿನಲ್ಲಿ ರೈತರು ಏನು ಮಾಡುತ್ತಿದ್ದಾರೆ?

ಗು: ಮುಂಗಾರು ಬೆಳೆ ಕಟಾವು ಮುಗಿದಿದೆ. ಬೇಸಗೆ ಬೆಳೆ ಬೆಳೆಯಲು ಜೋಡೆತ್ತಿನ ನೊಗಕ್ಕೆ ನೇಗಿಲು ಹೂಡಿ ಭೂಮಿಯ ಉಳುಮೆ ಮಾಡುತ್ತಿದ್ದಾರೆ. ಇವರು ಬರೀ ರೈತರಲ್ಲ ‘ಉಳುವ ಯೋಗಿಗಳು’. ಶ್ರಮ ಜೀವಿಗಳ ಫಲವಾಗಿ ನಾವು ತರಕಾರಿ, ಅನ್ನ, ಮುದ್ದೆ ಊಟ ಮಾಡಲು ಸಾಧ್ಯವಾಗಿದೆ.

ಶಿ: ನೇಗಿಲಿಗೆ ಇನ್ನೊಂದು ಹೆಸರಿದೆಯೇ, ಇದರ ಶಕ್ತಿ ಎಂತಹದ್ದು?

ಗು: ‘ಹಲ’ ಎಂದರೆ ನೇಗಿಲು ಎಂದರ್ಥ. ಇದನ್ನು ಹೋಲುವ ‘ಹಲಾಸನ’ವೂ ರೂಡಿಯಲ್ಲಿದೆ.

ಅಭ್ಯಾಸ ಕ್ರಮ
ನೆಲಕ್ಕೆ ಬೆನ್ನೊರಗಿಸಿ ಅಂಗಾತ ಮಲಗಿ. ಕೈಗಳು ತೊಡೆಯ ಪಕ್ಕ ಇರಲಿ. ಸರ್ವಾಂಗಾಸನದಲ್ಲಿ ವಿವರಿಸಿದಂತೆ ಕಾಲುಗಳನ್ನು ಜೋಡಿಸಿ ನಿಧಾನವಾಗಿ ಮೇಲೆತ್ತಿ. ನೆಲದಿಂದ 90 ಡಿಗ್ರಿ ಕೋನದಲ್ಲಿ ನಿಲ್ಲಿಸಿ. ಬಳಿಕ, ಉಸಿರನ್ನು ಹೊರ ಹಾಕುತ್ತಾ ಸೊಂಟಭಾಗವನ್ನು ಮೇಲೆತ್ತುತ್ತಾ ಕೈಗಳಿಂದ ಬೆನ್ನಿನ ಭಾಗವನ್ನು ಒಳಕ್ಕೆ ಒತ್ತಿ. ಕಾಲುಗಳು ತಲೆಯ ಮೇಲ್ಗಡೆ ನೆಲಕ್ಕೆ ತಾಗಿಸಿ ಎಷ್ಟು ಸಾಧ್ಯವೋ ಅಷ್ಟು ಹಿಂದೆಕ್ಕೆ ಚಾಚಿ. ಸೊಂಟಕ್ಕೆ ಆಧಾರವಾಗಿರಿಸಿದ್ದ ಕೈಗಳನ್ನು ಬಿಡಿಸಿ. ಎರಡೂ ಕೈ ಬೆರಳುಗಳನ್ನು ಹೆಣೆದು ನೀಳವಾಗಿಸಿ ನೆಲದ ಮೇಲಿರಿಸಿ. ಸಾಮಾನ್ಯ ಉಸಿರಾಟ ನಡೆಸಿ. ಅಂತಿಮ ಸ್ಥಿತಿಯಲ್ಲಿ 1 ರಿಂದ 3 ನಿಮಿಷ ನೆಲೆಸ‌ಬಹುದು.

ಫಲ: ಕತ್ತು, ಭುಜ ನೋವು ನಿವಾರಣೆ. ತೊಳು, ಅಂಗೈ, ಕೈ ಬೆರಳು ಹಿಗ್ಗಿ ದೋಷ ನಿವಾರಣೆ. ಕಿಬ್ಬೊಟ್ಟೆಗೆ ತಾರುಣ್ಯ ತುಂಬುತ್ತದೆ. ಬೆನ್ನೆಲುಬಿನ ಹಿಗ್ಗುವಿಕೆ, ಸರಿಯಾದ ರಕ್ತ ಪರಿಚಲನೆಯಾಗುತ್ತದೆ. ಅನ್ನದಾತನಿಂದ ನಮ್ಮ ದೇಹದಲ್ಲಿ ರಕ್ತ ಹರಿಯುತ್ತಿದೆ. ನೇಗಿಲ ಕುಳದೊಳು ಅಡಗಿರುವ ಶಕ್ತಿಯಿಂದ ರೈತ ದೇಶದ ಬೆನ್ನೆಲುಬು ಎನಿಸಿದ್ದಾನೆ. ಇದು ನೇಗಿಲ ಶಕ್ತಿ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.