ADVERTISEMENT

ಪಕ್ಷ ಬಲಪಡಿಸಲು ‘ಕಠಿಣ ನಿರ್ಧಾರ’ ಅಗತ್ಯ: ಎಐಸಿಸಿ ಸಭೆಯಲ್ಲಿ ಖರ್ಗೆ ಅಭಿಪ್ರಾಯ

ಪೂರಕ ವಾತಾವರಣವನ್ನು ಗೆಲುವಾಗಿ ಪರಿವರ್ತಿಸಬೇಕಿದೆ...

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 15:42 IST
Last Updated 29 ನವೆಂಬರ್ 2024, 15:42 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪಕ್ಷದಲ್ಲಿ ನವೋತ್ಸಾಹ ಮೂಡಿಸಿ, ಸಂಘಟನೆಯನ್ನು ಬಲಪಡಿಸಲು, ಚುನಾವಣೆಗಳಲ್ಲಿ ಪಕ್ಷದ ಹೋರಾಟದ ಶೈಲಿಯನ್ನೇ ಬದಲಿಸಲು ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದು ಅಗತ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರತಿಪಾದಿಸಿದ್ದಾರೆ. 

ಏಕತೆಯ ಕೊರತೆ, ಪರಸ್ಪರರ ವಿರುದ್ಧ ಹೇಳಿಕೆ ನೀಡುವುದು, ನಕಾರಾತ್ಮಕ ಅಥವಾ ನಿರಾಸೆಯಿಂದ ಮಾತನಾಡುವ ಬೆಳವಣಿಗೆಗಳನ್ನು ಉಲ್ಲೇಖಿಸಿದ ಖರ್ಗೆ ಅವರು, ‘ಪಕ್ಷಕ್ಕೆ ತನ್ನದೇ ಸಂಕಥನ ಇಲ್ಲದಿರುವುದು ಸಂಘಟನೆಗೆ ಪೆಟ್ಟು ನೀಡುತ್ತಿದೆ’ ಎಂದು ಹೇಳಿದರು.

ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪಕ್ಷವು ಕೈಗೊಂಡ ನಿಲುವು ಮತ್ತು ಹೋರಾಟದ ಶೈಲಿಯನ್ನು ಸಮರ್ಥಿಸಿಕೊಂಡರು. ಕೆಲವರು ಪರಸ್ಪರರ ವಿರುದ್ಧ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗು‌ತ್ತಿದೆ ಎಂದು ಹೇಳಿದರು.

ADVERTISEMENT

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆ ಕುರಿತು ಪಕ್ಷದ ಟೀಕೆಗೂ ಆಕ್ಷೇ‍ಪಿಸಿದವರನ್ನು ಉದ್ದೇಶಿಸಿ, ‘ಇ.ವಿ.ಎಂಗಳ ಬಳಕೆಯಿಂದಾಗಿ ಚುನಾವಣಾ ಪ್ರಕ್ರಿಯೆಯನ್ನೇ ಶಂಕಿಸುವಂತೆ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಉತ್ತಮ ಸಾಧನೆಯ ಬಳಿಕ ಮಹಾರಾಷ್ಟ್ರದ ಫಲಿತಾಂಶದ ಸಮರ್ಥನೆಗೆ ಯಾವುದೇ ಅಂಕಗಣಿತ ಲೆಕ್ಕಾಚಾರದಿಂದ ಅಸಾಧ್ಯ’ ಎಂದರು.

‘ಲೋಕಸಭೆ ಚುನಾವಣೆಯ ಉತ್ತಮ ಫಲಿತಾಂಶದ ಬಳಿಕ ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಆಯಿತು. ಅದೇ ಕಾರಣಕ್ಕೆ ಈಗ ಕಠಿಣ ನಿರ್ಧಾರ ಅಗತ್ಯ. ರಾಜಕೀಯ ಪ್ರತಿಸ್ಪರ್ಧಿಗಳ ನಡೆಗಳನ್ನು ನಿತ್ಯ ಗಮನಿಸಬೇಕು ಸಕಾಲದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.

‘ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ನಲ್ಲಿ ಪಕ್ಷದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಚುನಾವಣಾ ಫಲಿತಾಂಶದಿಂದ ಪಾಠ ಕಲಿತು ಲೋಪ, ದೌರ್ಬಲ್ಯಗಳನ್ನು ತಕ್ಷಣ ಸರಿಪಡಿಸಿಕೊಳ್ಳುವುದು ಈಗಿರುವ ಸವಾಲು’ ಎಂದು ಹೇಳಿದರು.

ಮುಖ್ಯವಾಗಿ ಒಗ್ಗಟ್ಟು ಇರಬೇಕು ಎಂದು ಪದೇ ಪದೇ ಹೇಳಲು ಬಯಸುತ್ತೇನೆ. ಒಗ್ಗಟ್ಟಿನಿಂದ ಎದುರಿಸದಿದ್ದರೆ, ಪರಸ್ಪರ ವಿರುದ್ಧದ ಹೇಳಿಕೆ ನಿಲ್ಲಿಸದಿದ್ದರೆ ರಾಜಕೀಯ ವಿರೋಧಿಗಳನ್ನು ಸೋಲಿಸುವುದಾದರೂ  ಹೇಗೆ ಎಂದು ಖರ್ಗೆ ಪ್ರಶ್ನಿಸಿದರು.

ಪಕ್ಷದಲ್ಲಿ ಶಿಸ್ತಿನ ಅಸ್ತ್ರವಿದೆ. ಆದರೆ, ಅದನ್ನು ಪ್ರಯೋಗಿಸಲು ಬಯಸುವುದಿಲ್ಲ. ಪಕ್ಷದ ಒಟ್ಟು ಶಕ್ತಿಯಲ್ಲಿಯೇ ನಮ್ಮ  ಶಕ್ತಿಯೂ ಇದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಖರ್ಗೆ ಅವರು ಪಕ್ಷದ ನಾಯಕರಿಗೆ ಕಟುವಾಗಿ ಹೇಳಿದರು.   

‘ವಿಧಾನಸಭೆ ಚುನಾವಣೆಯಲ್ಲಿ ವಾತಾವರಣ ಪಕ್ಷದ ಪರವಾಗಿತ್ತು. ಆದರೆ, ಅದೊಂದೇ ಗೆಲುವಿನ ಖಾತರಿಯನ್ನು ನೀಡದು. ಸಕಾರಾತ್ಮಕ ವಾತಾವರಣವನ್ನು ಗೆಲುವಾಗಿ ಪರಿವರ್ತಿಸುವ ಕಲೆಯನ್ನು ನಾವು ಸಿದ್ಧಿಸಿಕೊಳ್ಳಬೇಕಾಗಿದೆ. ನಾವು ವಾತಾವರಣದ ಅನುಕೂಲ ಪಡೆಯಲು ಏಕೆ ಆಗುತ್ತಿಲ್ಲ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದು ಕಿವಿಮಾತು ಹೇಳಿದರು. 

ರಾಷ್ಟ್ರಮಟ್ಟದ ವಿಷಯಗಳು, ರಾಷ್ಟ್ರೀಯ ನಾಯಕರನ್ನೇ ನೆಚ್ಚಿಕೊಂಡು ಎಷ್ಟು ದಿನ ರಾಜ್ಯ ಚುನಾವಣೆಗಳನ್ನು ಎದುರಿಸುತ್ತೀರಿ ಎಂದು ಮುಖಂಡರಿಗೆ ಪ್ರಶ್ನಿಸಿದ ಅವರು, ‘ಯಾವುದೇ ಕಾರಣಕ್ಕೂ ಸ್ಥಳೀಯ ವಿಷಯಗಳನ್ನು ಕಡೆಗಣಿಸಬಾರದು’ ಎಂದು ಸಲಹೆ ಮಾಡಿದರು.

ಕಾಂಗ್ರೆಸ್‌ ಪಕ್ಷ ಚುನಾವಣೆಗಳಲ್ಲಿ ಸೋತಿರಬಹುದು. ಆದರೆ ನಿರುದ್ಯೋಗ ಆರ್ಥಿಕ ಅಸಮಾನತೆ ಹಣದುಬ್ಬರ ‘ಜ್ವಲಂತ ಸಮಸ್ಯೆ’ಗಳು ಎಂದು ಮರೆಯಬಾರದು. ಜಾತಿಗಣತಿ ಕೂಡಾ ಮುಖ್ಯವಾದುದು
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.