ADVERTISEMENT

Maharashtra Politics: ಎಂವಿಎ ಮೈತ್ರಿಕೂಟದಲ್ಲಿ ಬಿರುಕು?

ಪಿಟಿಐ
Published 11 ಜನವರಿ 2025, 15:53 IST
Last Updated 11 ಜನವರಿ 2025, 15:53 IST
ಸಂಜಯ್ ರಾವುತ್ –ಪಿಟಿಐ ಚಿತ್ರ
ಸಂಜಯ್ ರಾವುತ್ –ಪಿಟಿಐ ಚಿತ್ರ   

ನಾಗ್ಪುರ: ಮಹಾರಾಷ್ಟ್ರದ ‘ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಶಿವಸೇನಾ (ಯುಬಿಟಿ), ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶನಿವಾರ ಹೇಳಿದೆ. ಪಕ್ಷದ ಈ ನಡೆಯು ಎಂವಿಎ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದೆ.

ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುವ ಹಕ್ಕು ತಮಗೆ ಇರುತ್ತದೆ ಹಾಗೂ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದರೆ ಪಕ್ಷದ ಕಾರ್ಯಕರ್ತರಿಗೆ ಅವಕಾಶಗಳ ಕೊರತೆ ಎದುರಾಗುತ್ತದೆ ಎಂಬ ಕಾರಣಕ್ಕೆ ಏಕಾಂಗಿಯಾಗಿ ಸ್ಪರ್ಧಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಎಪಿಗೆ ಬೆಂಬಲ ನೀಡುವುದಾಗಿ ಶಿವಸೇನಾ (ಯುಬಿಟಿ) ಎರಡು ದಿನಗಳ ಹಿಂದೆ ಘೋಷಿಸಿತ್ತು. ಈ ನಡೆಯು ದೆಹಲಿಯಲ್ಲಿ ಕಾಂಗ್ರೆಸ್ಸನ್ನು ಉಪೇಕ್ಷಿಸಿದಂತೆ ಇದೆ ಎಂದು ವಿಶ್ಲೇಷಿಸಲಾಗಿತ್ತು.

ADVERTISEMENT

ರಾವುತ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರೊಬ್ಬರು, ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.

ಶಿವಸೇನಾ (ಯುಬಿಟಿ) ತೀರ್ಮಾನವು ಎಂವಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ ಎಂದು ಎನ್‌ಸಿಪಿ (ಎಸ್‌ಪಿ) ಹೇಳಿದೆ. ‘ಇಂಡಿಯಾ’ ಹಾಗೂ ಎಂವಿಎ ಮೈತ್ರಿಕೂಟಗಳು ರಚನೆಯಾಗಿದ್ದುದು ಕ್ರಮವಾಗಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಎಂದು ರಾವುತ್ ಹೇಳಿದ್ದಾರೆ.

ಎಂವಿಎ ಪಕ್ಷಗಳ ನಡುವೆ ಸಮನ್ವಯದ ಕೊರತೆ ಇರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ರಾವುತ್ ದೂರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಸೋತ ವಿಚಾರವಾಗಿ ದೂಷಣೆಯಲ್ಲಿ ತೊಡಗಿದ್ದಕ್ಕೆ ಕಾಂಗ್ರೆಸ್ ಮುಖಂಡ ವಿಜಯ್ ವಡೆಟ್ಟಿವರ್ ಅವರನ್ನು ತರಾಟೆಗೆ ತೆಗೆದುಕೊಂಡ ರಾವುತ್, ‘ಸಹಮತ ಹಾಗೂ ಹೊಂದಾಣಿಕೆಯಲ್ಲಿ ನಂಬಿಕೆ ಇಲ್ಲದವರಿಗೆ ಮೈತ್ರಿಕೂಟದಲ್ಲಿ ಇರಲು ಹಕ್ಕಿಲ್ಲ’ ಎಂದು ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಪಕ್ಷದ ಕಾರ್ಯಕರ್ತರಿಗೆ ಸೇರಿದ್ದು. ನಮ್ಮ ಅನುಕೂಲಕ್ಕೆ ಅನುಗುಣವಾಗಿ ನಾವು ಸ್ಪರ್ಧಿಸಿದರೆ ಕಾರ್ಯಕರ್ತರು ಏನು ಮಾಡಬೇಕು? ನಾಯಕರ ಸುಪ್ಪತ್ತಿಗೆ ಎತ್ತುವ ಕೆಲಸ ಮಾತ್ರ ಮಾಡಬೇಕೇ?
– ಸುಪ್ರಿಯಾ ಸುಳೆ ಎನ್‌ಸಿಪಿ (ಎಸ್‌ಪಿ) ಕಾರ್ಯಕಾರಿ ಅಧ್ಯಕ್ಷೆ
‘ಕಾಂಗ್ರೆಸ್‌ ಹೊಣೆ ನಿಭಾಯಿಸಲಿ’
‘ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಇಂಡಿಯಾ ಮೈತ್ರಿಕೂಟವು ಒಂದು ಸಭೆಯನ್ನೂ ನಡೆಸಿಲ್ಲ. ಇಂಡಿಯಾ ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಿಸಿಲ್ಲ. ಇದು ಒಳ್ಳೆಯದಲ್ಲ. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಸಭೆಯನ್ನು ಕರೆಯುವುದು ಕಾಂಗ್ರೆಸ್ಸಿನ ಹೊಣೆ’ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.