ADVERTISEMENT

ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

ಸಂತೋಷ್‌ ಎಚ್‌. ಡಿ.
Published 3 ಜನವರಿ 2026, 11:27 IST
Last Updated 3 ಜನವರಿ 2026, 11:27 IST
<div class="paragraphs"><p>ಸತೀಶ್ ಧವನ್‌</p></div>

ಸತೀಶ್ ಧವನ್‌

   

ಪ್ರಜಾವಾಣಿ ಚಿತ್ರ

1979ರ ಜುಲೈನಲ್ಲಿ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಕಕ್ಷೆಗೆ ಕಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ, ರೋಹಿಣಿ ಎಂಬ ಉಪಗ್ರಹ ಹೊತ್ತ (SLV-3) ರಾಕೆಟ್‌ ನಭಕ್ಕೆ ಹಾರಿತ್ತು. ಆದರೆ ಆಗಸ್ಟ್ 10ರಂದು ಕಕ್ಷೆಗೆ ಸೇರಬೇಕಿದ್ದ ಉಪಗ್ರಹ ವೈಫಲ್ಯ ಅನುಭವಿಸಿತ್ತು. ಅಂದಿಗೆ ಈ ಯೋಜನೆಯ ನೇತೃತ್ವ ವಹಿಸಿದ್ದವರು ಭಾರತದ ಕ್ಷೀಪಣಿ ಮಾನವ ಎಂದೇ ಖ್ಯಾತಿ ಪಡೆದಿದ್ದ ಡಾ. ಎಪಿಜೆ ಅಬ್ದುಲ್‌ ಕಲಾಂ. 

ADVERTISEMENT

ಅಬ್ದುಲ್‌ ಕಲಾಂ ಅವರ ನೇತೃತ್ವದಲ್ಲಿ ಈ ಯೋಜನೆ ವಿಫಲಗೊಂಡಿತ್ತು. ಈ ವಿಷಯವನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸುವುದು ಹೇಗೆ? ಎಂದು ಕಲಾಂ ಚಿಂತೆಗೀಡಾಗಿದ್ದರು. ಆದರೆ, ಆ ಸಮಯದಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ಸತೀಶ್ ಧವನ್ ನಿರ್ಧಾರವೊಂದನ್ನು ತೆಗೆದುಕೊಂಡರು. 

ಸತೀಶ್ ಧವನ್ ಅವರು ಅಬ್ದುಲ್ ಕಲಾಂ ಬದಲು ತಾವೇ ಸ್ವತಃ ಮಾಧ್ಯಮಗಳಿಗೆ ಉತ್ತರಿಸಲು ನಿರ್ಧರಿಸಿದ್ದರು. ಯೋಜನೆ ವೈಫಲ್ಯದ ಹೊರತಾಗಿಯೂ ತಮ್ಮ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಮುಂದಿನ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಅಂದಿಗೆ ಇಸ್ರೋದ ವೈಫಲ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು, ಧವನ್ ಮಾಧ್ಯಮಗಳ ಮೂಲಕ ದೇಶದ ಜನರಿಗೆ ಯಶಸ್ಸು ಹತ್ತಿರದಲ್ಲಿದೆ ಎಂಬ ಭರವಸೆ ನೀಡಿದರು.

ಈ ಘಟನೆಯ ನಂತರ ಇಸ್ರೋ ಸಾಕಷ್ಟು ಯಶಸ್ವಿ ಉಡ್ಡಯನಗಳನ್ನು ನಡೆಸಿತು. ನಂತರದ ವರ್ಷದಲ್ಲಿ ಕಲಾಂ ಅವರು ಸತೀಶ್‌ ಧವನ್‌ ಅವರ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತ, ’ವೈಫಲ್ಯ ಸಂಭವಿಸಿದಾಗ ನಾಯಕನಾಗಿ ಅದರ ಜವಾಬ್ದಾರಿಯನ್ನು ಹೊರುತ್ತಿದ್ದರು. ಯಶಸ್ಸು ಬಂದಾಗ ತಮ್ಮ ತಂಡಕ್ಕೆ ಮನ್ನಣೆ ನೀಡುತ್ತಿದ್ದರು’ ಎಂದು ಸತೀಶ್ ಧವನ್ ಕಾರ್ಯವನ್ನು ಹೊಗಳಿದ್ದರು.

ಸತೀಶ್‌ ಧವನ್‌ ಪುಣ್ಯಸ್ಮರಣೆಯ ಕುರಿತು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದಿಂದ ಕ್ಯಾಲಿಫೋರ್ನಿಯಾಗೆ

ಸತೀಶ್ ಧವನ್‌ ಅವರು 1920ರ ಸೆಪ್ಟೆಂಬರ್ 25ರಂದು ಭಾರತದ ಶ್ರೀನಗರದಲ್ಲಿ ಜನಿಸಿದರು. ಇವರ ತಂದೆ ನ್ಯಾಯಾಧೀಶರಾಗಿದ್ದರು. ಲಾಹೋರ್‌ನಲ್ಲಿ ಶಿಕ್ಷಣ ಪಡೆದುಕೊಂಡರು. ಭೌತವಿಜ್ಞಾನ, ಗಣಿತ, ಸಾಹಿತ್ಯ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದರು. 

1945ರಲ್ಲಿ ಬೆಂಗಳೂರಿಗೆ ಬಂದ ಧವನ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಕೆಲಸ ಆರಂಭಿಸಿದರು. ಕೆಲ ಕಾಲದ ಬಳಿಕ ಅಮೆರಿಕಕ್ಕೆ ತೆರಳಿದ ಅವರು, ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿ ಪಡೆದರು. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಪದವಿ ಪಡೆದರು.

ಸತೀಶ್ ಧವನ್‌

ಪ್ರಾಧ್ಯಾಪಕನಾಗಿ ಸತೀಶ್ ಧವನ್: 

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಸತೀಶ್ ಧವನ್‌ ಅವರು ವಿದೇಶದಲ್ಲಿದ್ದರು. ಭಾರತ–ಪಾಕಿಸ್ತಾನ ವಿಭಜನೆಯಿಂದ ಅವರ ಕುಟುಂಬ ಪಾಕಿಸ್ತಾನದಿಂದ ಭಾರತಕ್ಕೆ ಸ್ಥಳಾಂತರಗೊಂಡಿತು. ಅಧ್ಯಯನ ಮುಗಿಸಿ ಭಾರತಕ್ಕೆ ಮರಳಿದ ಧವನ್ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಏರೋನಾಟಿಕ್ಸ್ ವಿಭಾಗಕ್ಕೆ ಸೇರಿದರು. ಅಲ್ಲಿ ಪ್ರಾಧ್ಯಾಪಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದರು. 

ಇಸ್ರೋ ಅಧ್ಯಕ್ಷರ ಪ್ರಯಾಣ: 

ದೇಶದ ಮೊದಲ ಸೂಪರ್‌ಸಾನಿಕ್ ಗಾಳಿಯ ಸುರಂಗಗಳನ್ನು ನಿರ್ಮಿಸುವುದರಿಂದ ಆರಂಭವಾದ ಅವರ ಪಯಣ, ಭಾರತದ ವೈಜ್ಞಾನಿಕ ಭವಿಷ್ಯವನ್ನು ರೂಪಿಸುವವರೆಗೂ ಮುಂದುವರಿಯಿತು. 1962ರಲ್ಲಿ ಐಐಎಸ್‌ಸಿಯ ನಿರ್ದೇಶಕರಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ, ಕಂಪ್ಯೂಟರ್ ವಿಜ್ಞಾನ, ಆಣ್ವಿಕ ಜೈವಿಕ ಭೌತವಿಜ್ಞಾನ, ಘನ-ಸ್ಥಿತಿ ರಸಾಯನವಿಜ್ಞಾನ, ಪರಿಸರ ವಿಜ್ಞಾನ ಮತ್ತು ವಾತಾವರಣ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳು ಪ್ರವರ್ಧಮಾನಕ್ಕೆ ಬಂದವು. 

ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದ ವಿಕ್ರಮ್ ಸಾರಾಭಾಯ್ ಅವರು ತಮ್ಮ 52ನೇ ವಯಸ್ಸಿನಲ್ಲಿ ಹಠಾತ್ ಮರಣ ಹೊಂದಿದರು. ಇದು ಭಾರತೀಯ ಬಾಹ್ಯಾಕಾಶಕ್ಕೆ ತುಂಬಲಾರದ ನಷ್ಟವಾಗಿತ್ತು. ಅವರ ಸಾವಿನಿಂದಾಗಿ ಹಲವು ಬಹ್ಯಾಕಾಶ ಯೋಜನೆಗಳು ನೆನೆಗುದುಗೆ ಬಿದ್ದವು. ಈ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎನ್. ಹಕ್ಸರ್ ಅವರ ಸಲಹೆಯ ಮೇರೆಗೆ ಧವನ್ ಅವರನ್ನು ಇಸ್ರೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಒತ್ತಾಯಿಸಿದರು.

ಒತ್ತಾಯದ ಮೇರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡ ಧವನ್, ಎರಡು ಷರತ್ತುಗಳನ್ನು ಹಾಕಿದ್ದರು. ಮೊದಲನೆಯದು ಅವರು ಐಐಎಸ್‌ಸಿ ನಿರ್ದೇಶಕರಾಗಿ ಮುಂದುವರಿಯುವುದು. ಇಸ್ರೋದ ಪ್ರಧಾನ ಕಚೇರಿ ಅಹಮದಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ಇಂದಿರಾ ಗಾಂಧಿಯ ಒಪ್ಪಿಗೆಯೂ ದೊರೆಯಿತು. 

ಇವರು ಅಧ್ಯಕ್ಷರಾದ ನಂತರ ಇಸ್ರೋದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದರು. ಚದುರಿ ಹೋಗಿದ್ದ ಸಂಸ್ಥೆಯನ್ನು ಕ್ರಮಬದ್ಧವಾಗಿ ಸಿದ್ದಗೊಳಿಸಿದರು. ಸೈಟ್ ಪ್ರಾಜೆಕ್ಟ್‌, ಆರ್ಯಭಟ, ಭಾಸ್ಕರ, ಇನ್‌ಸ್ಯಾಟ್, ಐಆರ್‌ಎಸ್ ಸೇರಿದಂತೆ ಪ್ರಮುಖ ಉಡಾವಣ ರಾಕೆಟ್‌ಗಳಾದ SLV-3, ಆ್ಯಪಲ್ ಹಾಗೂ PSLV ರಚನೆಯಲ್ಲಿ ಧವನ್ ಅವರ ಕೊಡುಗೆ ಮಹತ್ವದ್ದಾಗಿದೆ. 

ಇಂದು ಸತೀಶ್ ಧವನ್‌ ನಿಧನರಾದ ದಿನವಾಗಿದೆ. ಅವರು ಜನವರಿ 3, 2002ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.