ADVERTISEMENT

ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

ಪಿಟಿಐ
Published 3 ಮಾರ್ಚ್ 2026, 11:08 IST
Last Updated 3 ಮಾರ್ಚ್ 2026, 11:08 IST
<div class="paragraphs"><p>ಎಂ.ಕೆ.ಸ್ಟಾಲಿನ್‌ ಮತ್ತು&nbsp;ಪಿ.ಚಿದಂಬರಂ</p></div>

ಎಂ.ಕೆ.ಸ್ಟಾಲಿನ್‌ ಮತ್ತು ಪಿ.ಚಿದಂಬರಂ

   

ಚೆನ್ನೈ: ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್‌ ನಡುವೆ ಬಿಕ್ಕಟ್ಟು ಎದುರಾಗಿರುವ ಹೊತ್ತಿನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸುಮಾರು ಒಂದು ಗಂಟೆವರೆಗೆ ನಡೆದ ಸಭೆಯಲ್ಲಿ ಸೀಟು ಹಂಚಿಕೆ ಸಂಬಂಧ ಎರಡೂ ಪಕ್ಷಗಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಸ್ಟಾಲಿನ್ ಅವರೊಂದಿಗೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ADVERTISEMENT

ಎರಡೂ ಪಕ್ಷಗಳು ಮೈತ್ರಿ ಮುಂದುವರಿಸಬೇಕೆಂದು ಬಯಸಿದ್ದವು. ಆದರೆ, ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಒಂದು ರಾಜ್ಯಸಭಾ ಸ್ಥಾನ ಮತ್ತು 40 ವಿಧಾನಸಭಾ ಸ್ಥಾನ ಬಿಟ್ಟುಕೊಡಬೇಕು ಎಂಬ ಕಾಂಗ್ರೆಸ್‌ ನಾಯಕರ ಬೇಡಿಕೆಗೆ ಡಿಎಂಕೆ ನಾಯಕರು ಒಪ್ಪಿರಲಿಲ್ಲ.

ಎರಡು ರಾಜ್ಯಸಭಾ ಸ್ಥಾನ ಮತ್ತು 28 ವಿಧಾನಸಭಾ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್‌ ನೇತೃತ್ವದ ಸೀಟು ಹಂಚಿಕೆ ಸಮಿತಿಯು ಡಿಎಂಕೆಯ ಟಿ.ಆರ್‌.ಬಾಲು ನೇತೃತ್ವದ ಸಮಿತಿಗೆ ತಾನು ಬಯಸಿರುವ ಸ್ಥಾನಗಳ ಪಟ್ಟಿ ನೀಡಿತ್ತು.

ಚೋಂಡಕರ್‌ ನೇತೃತ್ವದ ಐವರ ನಿಯೋಗ ಮಂಗಳವಾರ ಡಿಎಂಕೆ ಜೊತೆ ಮಾತುಕತೆ ನಡೆಸಬೇಕಿತ್ತು. ಈ ಮಧ್ಯೆ ಕುತೂಹಲದ ಹೆಜ್ಜೆ ಇಟ್ಟಿರುವ ಕಾಂಗ್ರೆಸ್ ಹೈಕಮಾಂಡ್, ಡಿಎಂಕೆ ನಾಯಕತ್ವದ ಜೊತೆ ನೇರ ಮಾತುಕತೆ ನಡೆಸಿ, ಪರಸ್ಪರರು ಒಪ್ಪುವ ಪರಿಹಾರ ಕಂಡುಕೊಳ್ಳುವಂತೆ ಹಿರಿಯ ನಾಯಕ ಪಿ.ಚಿದಂಬರಂ ಅವರಿಗೆ ಸೂಚಿಸಿದೆ.

‌ಡಿಎಂಕೆ ಮೈತ್ರಿ ಮುಂದುವರಿಸಬೇಕೆಂದು ಬಯಸುತ್ತಿದೆ. ಈ ಕುರಿತು ಮಾತುಕತೆ ಮುಂದುವರೆದಿದೆ. ನಮ್ಮ ನಾಯಕರು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಡಿಎಂಕೆ ವಕ್ತಾರ ಎಳಂಗೋವನ್ ಹೇಳಿದ್ದಾರೆ.