
ಸಾರ್ವತ್ರಿಕ ಮುಷ್ಕರಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಂಡ ಘೋಷವಾಕ್ಯ
(ಸಂಗ್ರಹ ಚಿತ್ರ)
ಬೆಂಗಳೂರು: ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ, ನರೇಗಾ ಉಳಿಸಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಫೆ.12ರಂದು ಸಾರ್ವತ್ರಿಕ ಮುಷ್ಕರ ನಡೆಸಲಿದ್ದು, ಜನಜೀವನ, ಸಾರ್ವಜನಿಕ ಸಂಚಾರ ಯಥಾಸ್ಥಿತಿಯಲ್ಲಿರಲಿವೆ. ಕೈಗಾರಿಕಾ ಸಂಸ್ಥೆಗಳಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಬಿಡದಿ, ಕುಂಬಳಗೋಡು, ಜಿಗಣಿ, ಬೊಮ್ಮಸಂದ್ರ, ನರಸೀಪುರ, ಪೀಣ್ಯ, ವೇಮಗಲ್, ದಾಬಸ್ಪೇಟೆ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್ಫೀಲ್ಡ್ ಸೇರಿದಂತೆ ಎಲ್ಲ ಕೈಗಾರಿಕಾ ವಲಯಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸದೇ ಮುಷ್ಕರವನ್ನು ಬೆಂಬಲಿಸಲಿದ್ದಾರೆ. ಆಯಾ ವಲಯಗಳಲ್ಲಿ ಪ್ರತಿಭಟನಾ ಸಭೆಗಳೂ ನಡೆಯಲಿವೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಲ್ಐಸಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸಾರಿಗೆ ನಿಗಮಗಳು, ಬ್ಯಾಂಕ್ಗಳು ಸೇರಿದಂತೆ ಉಳಿದ ಸಾರ್ವಜನಿಕ ವಲಯಗಳ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿವೆ.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಫೆ.12ರಂದು ಬೆಳಿಗ್ಗೆ 11.30ಕ್ಕೆ ಪುರಭವನದಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೆ ಒಳಗಾಗಲು ನಿರ್ಧರಿಸಲಾಗಿದೆ. ವಿವಿಧ ವಿಭಾಗದ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಜೆಸಿಟಿಯು ಸಮನ್ವಯಕಾರ ಕೆ.ವಿ. ಭಟ್ ತಿಳಿಸಿದ್ದಾರೆ.
‘ಜನಜೀವನಕ್ಕೆ ನೇರ ಪರಿಣಾಮ ಆಗದೇ ಇರಬಹುದು. ಆದರೆ, ಕೈಗಾರಿಕೋದ್ಯಮಿಗಳು, ಐಟಿ–ಬಿಟಿ ಉದ್ಯಮಿಗಳು ಸೇರಿದಂತೆ ಬಂಡವಾಳಶಾಹಿಗಳಿಗೆ ಹೊಡೆತ ಬೀಳಲಿದೆ. ಒಂದು ದಿನದ ಉತ್ಪಾದನೆ ಸ್ಥಗಿತಗೊಂಡಾಗ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಆಗಲಾದರೂ ಕಾರ್ಮಿಕರ ಮಹತ್ವ ಅರ್ಥವಾಗಲಿ ಎಂದು ಮುಷ್ಕರ ಕೈಗೊಳ್ಳಲಾಗಿದೆ’ ಎಂದು ಸಿಐಟಿಯು ಅಧ್ಯಕ್ಷ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ.
ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಬೇಕು.
ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ನರೇಗಾ ಪುನರ್ ಸ್ಥಾಪಿಸಬೇಕು.
ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು.
ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.
ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು.
ಬೀಜ ಕಾಯ್ದೆ ಹಿಂಪಡೆಯಬೇಕು.
ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು.
ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಸಂಬಂಧಿಸಿದ ಅಧಿಸೂಚನೆ ರದ್ದುಪಡಿಸಬೇಕು.
ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ ಮಾಡಲು ಅಧಿಸೂಚನೆ ಹೊರಡಿಸಬೇಕು.
ಕೇಂದ್ರದ ಜನವಿರೋಧಿ ಕಾಯ್ದೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂಬುದು ಬೇಡಿಕೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.