ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು
ಪಿಟಿಐ ಚಿತ್ರ
ದುಬೈ/ಕರಾಚಿ: ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ನಿಗಧಿ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಸಿದ ತುರ್ತು ಸಭೆ ಫಲಪ್ರದವಾಗಿಲ್ಲ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಪಾಕಿಸ್ತಾನ ಸಮ್ಮತಿಸದ ಕಾರಣ, ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.
ಸಭೆ ಬಳಿಕ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು, ಸರ್ಕಾರದಿಂದ ಅನುಮತಿ ಸಿಗದ ಕಾರಣ ಭಾರತ ತಂಡವು ಪಾಕ್ಗೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದರೂ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
'ಐಸಿಸಿ ಮಂಡಳಿಯ ಸಭೆ ಕೆಲಹೊತ್ತು ನಡೆಯಿತು. ಸಕಾರಾತ್ಮಕ ನಿಲುವಿಗೆ ಬರುವ ಸಂಬಂಧ ಎಲ್ಲ ಭಾಗಿದಾರರು ಕಾರ್ಯೋನ್ಮುಖರಾಗಿದ್ದಾರೆ. ಮಂಡಳಿಯು ಸಭೆಯನ್ನು ಶನಿವಾರ ಪುನರಾರಂಭಿಸಲಿದೆ. ಇನ್ನೂ ಕೆಲವು ದಿನಗಳ ವರೆಗೆ ಸಭೆ ಮುಂದುವರಿಯುವ ಸಾಧ್ಯತೆ ಇದೆ' ಎಂದು ಐಸಿಸಿಯ ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರವೇ ದುಬೈಗೆ ಬಂದಿರುವ ನಖ್ವಿ, ಸಭೆಯಲ್ಲಿ ಪಾಕಿಸ್ತಾನದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವರ್ಚುವಲ್ ಆಗಿ ಸಭೆಗೆ ಹಾಜರಾಗಿದ್ದರು. ಅವರು, ಐಸಿಸಿಯ ಮುಖ್ಯಸ್ಥರಾಗಿ ಡಿಸೆಂಬರ್ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಟೂರ್ನಿಯು 2025ರ ಫೆಬ್ರುವರಿಯಲ್ಲಿ ಆರಂಭವಾಗಲಿದೆ. ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿರುವುದರಿಂದ ವೇಳಾಪಟ್ಟಿ ವಿಳಂಬವಾಗಿದೆ. 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ.
ಪೂರ್ವಭಾವಿ ವೇಳಾಪಟ್ಟಿಯಂತೆ ಫೆ. 19 ರಿಂದ ಮಾರ್ಚ್ 9ರವರೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕ್ ಆತಿಥ್ಯದಲ್ಲಿ ನಡೆಯಬೇಕಿದೆ. ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂಬದು ಆ ದೇಶ ಪಟ್ಟುಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.