ADVERTISEMENT

ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ; ರೈತರ ಹೋರಾಟಕ್ಕೆ ಹರ್‌ಪ್ರೀತ್ ಬೆಂಬಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2021, 13:00 IST
Last Updated 1 ಮೇ 2021, 13:00 IST
ಆಲ್‌ರೌಂಡರ್ ಹರ್‌ಪ್ರೀತ್ ಬ್ರಾರ್
ಆಲ್‌ರೌಂಡರ್ ಹರ್‌ಪ್ರೀತ್ ಬ್ರಾರ್   

ಅಹಮದಾಬಾದ್: ಕೇವಲ ಒಂದೇ ಒಂದು ಐಪಿಎಲ್ ಪಂದ್ಯದ ಮೂಲಕ ಅತಿ ಹೆಚ್ಚಿನ ಮನ್ನಣೆಗೆ ಪಾತ್ರರಾಗಿರುವ ಪಂಜಾಬ್ ಮೂಲದ ಆಲ್‌ರೌಂಡರ್ ಹರ್‌ಪ್ರೀತ್ ಬ್ರಾರ್ ಇತ್ತೀಚೆಗೆ ನೀಡಿರುವ ಹೇಳಿಕೆಯು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರವಾಗಿ ನಾನು ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ ಎಂದು ಹೇಳಿರುವ ಹರ್‌ಪ್ರೀತ್ ಬ್ರಾರ್, ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ತಿರುಗೇಟು ನೀಡಿದ್ದರು.

ಅಲ್ಲದೆ ಅದೇ ಟ್ವೀಟ್‌ನಲ್ಲಿ ಉಲ್ಲೇಖಿಸಿದ ಹ್ಯಾಶ್‌ಟ್ಯಾಗ್‌ನಲ್ಲಿ ರೈತರನ್ನು ಬೆಂಬಲಿಸುವುದಾಗಿ ಹೇಳಿದ್ದರು. ಇದೀಗ ವೈರಲ್ ಆಗಿದೆ.

ADVERTISEMENT

2015ರಲ್ಲಿ ಬಿಡುಗಡೆಗೊಂಡ 'ಸಿಂಗ್ ಈಸ್ ಬ್ಲಿಂಗ್' ಬಾಲಿವುಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಹೆಚ್ಚಿನ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು.

ಏ.25ರಂದು ಅಭಿಮಾನಿಯೊಬ್ಬರು ನೀವು ಸಿಂಗ್ ಈಸ್ ಬ್ಲಿಂಗ್ ಚಿತ್ರದಲ್ಲಿರುವ ಅಕ್ಷಯ್ ಕುಮಾರ್ ಅವರನ್ನೇ ಹೋಲುತ್ತಿದ್ದೀರಿ ಎಂದು ಮೆಸೇಜ್ ಮಾಡಿದ್ದರು. ಇದಕ್ಕುತ್ತರಿಸಿರುವ ಬ್ರಾರ್, ನಾನು ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ ಎಂದು ಖಡಕ್ ಜವಾಬ್ ನೀಡಿದ್ದಾರೆ.

ಏತನ್ಮಧ್ಯೆ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ರಾಷ್ಟ್ರರಾಜಧಾನಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಬ್ರಾರ್ ಗಮನ ಸೆಳೆದಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಹರ್‌ಪ್ರೀತ್ ಬ್ರಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಐಪಿಎಲ್‌ನಲ್ಲಿ ಅವರು ಪಡೆದ ಮೊದಲ ಮೂರು ವಿಕೆಟ್‌ಗಳು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಅವರದ್ದಾಗಿದೆ. ಈ ಮುನ್ನ ಬ್ಯಾಟಿಂಗ್‌ನಲ್ಲೂ ಮಿಂಚುವ ಮೂಲಕ ನೈಜ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದರು.

ಇವನ್ನೂ ಓದಿ:



ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.