ಹುಸೇನಮಿಯಾ ರಮಣೇದ ಕುಟುಂಬಸ್ಥರು
ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಸಂಭವಿಸಿರುವ ಅಪಘಾತದಲ್ಲಿ ಮೃತಪಟ್ಟಿರುವ 10 ಮಂದಿಯು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನಿವಾಸಿಗಳು. ಇವರ ಸಾವಿನಿಂದ ಸವಣೂರಿನ ಪ್ರತಿ ಓಣಿಯಲ್ಲೂ ದುಃಖ ಮಡುಗಟ್ಟಿದೆ.
ಪಟ್ಟಣದ ಹಲವೆಡೆ ಪ್ರತ್ಯೇಕವಾಗಿ ವಾಸವಿದ್ದ ಮೃತರು, ತರಕಾರಿ ಹಾಗೂ ಹಣ್ಣು ವ್ಯಾಪಾರಕ್ಕೆಂದು ಕುಮಟಾ ಸಂತೆಗೆ ಹೊರಟಿದ್ದರು. ಇವರ ಸಾವಿನಿಂದ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಬಂಧಿಕರು ಮನೆಗೆ ಬಂದು ಕುಟುಂಬಸ್ಥರನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ, ದಾರುಣ ಘಟನೆಯಿಂದ 10 ಜನ ಒಂದೇ ದಿನ ಮೃತಪಟ್ಟಿದ್ದರಿಂದ ಇಡೀ ಪಟ್ಟಣವೇ ದುಃಖದಲ್ಲಿದೆ.
ಓಣಿಯ ಮುಖಂಡರೇ ಮುಂದೆ ನಿಂತು ವಿಧಿವಿಧಾನ ಪೂರೈಸಲು ಸಿದ್ದತೆ ಮಾಡುತ್ತಿದ್ದಾರೆ. ಇಂಥ ಘಟನೆ ಜೀವನದಲ್ಲಿ ಎಂದಿಗೂ ನೋಡಿರಲಿಲ್ಲವೆಂದು ಜನರು ಹೇಳುತ್ತಿದ್ದಾರೆ.
ಯಲ್ಲಾಪುರ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತದೇಹಗಳು ಇವೆ. ಅವುಗಳನ್ನು ಸವಣೂರಿಗೆ ತರುವ ಕೆಲಸ ನಡೆಯುತ್ತಿದೆ. ಮೃತರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ.
ಹಾವೇರಿ ಪೊಲೀಸ್ ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ, ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಅವರು ಯಲ್ಲಾಪುರ ಆಸ್ಪತ್ರೆಯಲ್ಲಿಯೇ ಬೀಡು ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.