ಮಾಣಿಕ್ ರಾವ್ ಕೊಕಟೆ
Credit: X/@MahaDGIPR
ನಾಸಿಕ್/ಮುಂಬೈ: ರೈತರು ಕೃಷಿ ಯೋಜನೆಗಳಿಂದ ಪಡೆದ ಹಣವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಖರ್ಚು ಮಾಡುವುದಿಲ್ಲ. ಬದಲಿಗೆ ನಿಶ್ಚಿತಾರ್ಥ, ಮದುವೆ ಸಮಾರಂಭಗಳಿಗೆ ಬಳಸುತ್ತಾರೆ ಎಂದು ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್ ರಾವ್ ಕೊಕಟೆ ಹೇಳಿದ್ದಾರೆ.
ಮಾಣಿಕ್ರಾವ್ ಕೊಕಟೆ ಅವರು ನಾಸಿಕ್ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಕೆಲವು ಹಳ್ಳಿಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ನಿಯಮಿತವಾಗಿ ಸಾಲ ಮರುಪಾವತಿಸುವ ಬೆಳೆಗಾರರಿಗೆ ಸಾಲ ಮನ್ನಾ ಸಿಗುತ್ತದೆಯೇ ಎಂಬ ರೈತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ರೈತರು ಬಾಂಕ್ಗಳಲ್ಲಿ ಸಾಲ ಪಡೆಯುತ್ತಾರೆ. ಸರ್ಕಾರ ಸಾಲ ಮನ್ನಾ ಮಾಡಬಹುದೆಂಬ ಉದ್ದೇಶದಿಂದ ಸಾಲ ಮರುಪಾವತಿ ಮಾಡದೆ 5ರಿಂದ 10 ವರ್ಷಗಳ ಕಾಲ ಕಾಯುತ್ತಾರೆ. ಕೃಷಿಯಲ್ಲಿ ಹೂಡಿಕೆ (ನೀರಾವರಿ, ಪೈಪ್ಲೈನ್, ಕೃಷಿ ಹೊಂಡಗಳು...ಇತರೆ) ಮಾಡಲು ಸರ್ಕಾರ ನಿಮಗೆ (ರೈತರಿಗೆ) ಹಣವನ್ನು ನೀಡುತ್ತದೆ. ಆದರೆ, ರೈತರು ನಿಜವಾಗಿಯೂ ಅಂತಹ ಹೂಡಿಕೆ ಮಾಡುತ್ತಾರೆಯೇ’ ಎಂದು ಮರು ಪ್ರಶ್ನೆ ಕೇಳಿದ್ದಾರೆ.
‘ರೈತರು ಬೆಳೆ ವಿಮಾ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಾರೆ. ಆದರೆ, ಅದನ್ನು ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಿಗೆ ಬಳಸುತ್ತಾರೆ’ ಎಂದು ಕೊಕಟೆ ಹೇಳಿದ್ದಾರೆ.
ಕೊಕಟೆ ಅವರು ರೈತರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.