ADVERTISEMENT

‘ಪಕ್ಷೇತರರನ್ನು ಹೇಗೆ ಕರೆತರುತ್ತಾರೆ ನೋಡುತ್ತೇನೆ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:17 IST
Last Updated 23 ಜುಲೈ 2019, 20:17 IST
ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ಜಟಾಪಟಿ
ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ಜಟಾಪಟಿ   

ಬೆಂಗಳೂರು: ‘ಇಬ್ಬರು ಪಕ್ಷೇತರ ಶಾಸಕರು ವಿಧಾನಸಸೌಧದ ಒಂದರೆಡು ಕಿ.ಮೀ.ವ್ಯಾಪ್ತಿಯಲ್ಲೇ ಬಚ್ಚಿಟ್ಟುಕೊಂಡು ಇದ್ದಾರೆ. ಅವರನ್ನು ಹೇಗೆ ವಿಶ್ವಾಸಮತಕ್ಕೆ ಕರೆತರುತ್ತಾರೆ ಎಂಬುದನ್ನು ನೋಡುತ್ತೇನೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ಮಂಗಳವಾರ ಸಂಜೆ ಕಲಾಪದಲ್ಲಿ ವಿಶ್ವಾಸಮತ ಚರ್ಚೆ ನಡೆಯುತ್ತಿದ್ದ ವೇಳೆ ಹೊರಗಡೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷೇತರ ಶಾಸಕರು ಅದು ಹೇಗೆ ವಿಶ್ವಾಸಮತ ವಿರುದ್ಧ ಮತ ಚಲಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ’ ಎಂದರು.

ಕಾಂಗ್ರೆಸ್‌– ಬಿಜೆಪಿ ಜಟಾಪಟಿ: ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿತೇಶ್‌ ವಿಂಬಲ್ಡನ್‌ ಪಾರ್ಕ್‌ ಅಪಾರ್ಟ್‌ಮೆಂಟ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯರ್ತರು, ಅಲ್ಲಿ ತಂಗಿದ್ದ ಪಕ್ಷೇತರ ಶಾಸಕರಾದ ಆರ್‌. ಶಂಕರ್‌ ಮತ್ತು ಎಚ್‌. ನಾಗೇಶ್‌ ಹೊರ ಹೋಗದಂತೆ ತಡೆದರು.

ADVERTISEMENT

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯುತ್ತಿದ್ದಂತೆ ನೂಕಾಟ, ತಳ್ಳಾಟ ನಡೆಯಿತು. ಈ ವೇಳೆ, ಮಧ್ಯಪ್ರವೇಶಿಸಿದ ಪೊಲೀಸರು, ಗುಂಪು ಸೇರಿದವರನ್ನು ಚದುರಿಸಲು ಹರಸಾಹಸಪಟ್ಟರು. ಕೆಲಹೊತ್ತಿನ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈ ಇಬ್ಬರೂ, ವಿಧಾನಸಭೆ ಕಲಾಪಕ್ಕೆ ಗೈರಾಗಿದ್ದರು.

**

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.