ADVERTISEMENT

T20 World Cup: ಭಾರತಕ್ಕಷ್ಟೇ ಅಲ್ಲ, ಜಿಂಬಾಬ್ವೆಗೂ ಇದೆ ಸೆಮಿಫೈನಲ್‌ಗೇರುವ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 12:41 IST
Last Updated 26 ಫೆಬ್ರುವರಿ 2026, 12:41 IST
<div class="paragraphs"><p>ಜಿಂಬಾಬ್ವೆ ತಂಡದ ಆಟಗಾರರು</p></div>

ಜಿಂಬಾಬ್ವೆ ತಂಡದ ಆಟಗಾರರು

   

ಪಿಟಿಐ ಚಿತ್ರ

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌ 8ರ ಪಂದ್ಯಗಳು ನಡೆಯುತ್ತಿವೆ. ʼಬಿʼ ಗುಂಪಿನಲ್ಲಿರುವ ಇಂಗ್ಲೆಂಡ್‌ ತಂಡ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ನೇರವಾಗಿ ಸೆಮಿಫೈನಲ್‌ ತಲುಪಿದೆ.

ADVERTISEMENT

ನಾಕೌಟ್‌ ಸುತ್ತಿನಲ್ಲಿ ಉಳಿದಿರುವ ಮೂರು ಸ್ಥಾನಗಳಿಗಾಗಿ ʼಎʼ ಗುಂಪಿನಿಂದ ಎಲ್ಲ ತಂಡಗಳೂ (ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಂಡೀಸ್‌, ಭಾರತ, ಜಿಂಬಾಬ್ವೆ) ಜಿದ್ದಿಗೆ ಬಿದ್ದಿವೆ. ʼಬಿʼ ಗುಂಪಿನಿಂದ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ.

ದಕ್ಷಿಣ ಆಫ್ರಿಕಾ ಗೆಲುವಿನ ಲಾಭ ಯಾರಿಗೆ

ಇಂದು ಸೂಪರ್‌ 8 ಹಂತದ ಎರಡು ಪಂದ್ಯಗಳು ನಿಗದಿಯಾಗಿವೆ. ಮೊದಲ ಪಂದ್ಯವು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈಗಾಗಲೇ ಮುಕ್ತಾಯವಾಗಿದ್ದು, ವೆಸ್ಟ್‌ ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಪಡೆ ಸುಲಭ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌, ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 176 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಆಫ್ರಿಕಾ ಪಡೆ ಕೇವಲ 1 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಿ ಜಯದ ನಗೆ ಬೀರಿದೆ. ಇದರೊಂದಿಗೆ, ಸೆಮಿ ಫೈನಲ್‌ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

ಈ ಪಂದ್ಯದ ಫಲಿತಾಂಶಕ್ಕಾಗಿ ಟೀಂ ಇಂಡಿಯಾ ಮತ್ತು ಜಿಂಬಾಬ್ವೆ ಕ್ರಿಕೆಟ್‌ ಪ್ರಿಯರೂ ಕಾದು ಕುಳಿತಿದ್ದರು. ಟೀಂ ಇಂಡಿಯಾ ಅಭಿಮಾನಿಗಳು ಆಫ್ರಿಕನ್ನರ ಗೆಲುವಿಗಾಗಿ ಪ್ರಾರ್ಥಿಸಿದ್ದರು. ಅದರಂತೆ, ಹರಿಣಗಳ ಪಡೆ ಜಯ ಗಳಿಸಿದೆ. ಹೀಗಾಗಿ, ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತಕ್ಕೆ ನಾಕೌಟ್‌ ಹಾದಿ ತುಸು ಸಲೀಸಾಗಿದೆ. ಅದಕ್ಕಾಗಿ ಉಳಿದೆರಡೂ ಪಂದ್ಯಗಳಲ್ಲಿ ಗೆಲ್ಲಬೇಕು ಅಷ್ಟೇ!

ಭಾರತ ತಂಡ ಈ ಸುತ್ತಿನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಆಫ್ರಿಕಾ ಎದುರು ಮುಗ್ಗರಿಸಿತ್ತು. ಹೀಗಾಗಿ, ಇಂದು ವಿಂಡೀಸ್‌ ಮಣಿಯಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಬಯಕೆಯಾಗಿತ್ತು. ಅದು ಫಲಿಸಿದೆ.

ಆತಿಥೇಯ ತಂಡ ನೇರವಾಗಿ ಸೆಮಿಫೈನಲ್‌ ತಲುಪಲು, ಉಳಿದಿರುವ ತನ್ನ ಪಾಲಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇಂದು (ಫೆ.26) ರಾತ್ರಿ ಜಿಂಬಾಬ್ವೆ ಹಾಗೂ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಮಾರ್ಚ್‌ 1ರಂದು ವೆಸ್ಟ್‌ ಇಂಡೀಸ್‌ ತಂಡ ಭಾರತಕ್ಕೆ ಸವಾಲೊಡ್ಡಲಿದೆ.

ಜಿಂಬಾಬ್ವೆಗೂ ಇದೆ ಅವಕಾಶ

ಸಿಕಂದರ್‌ ರಝಾ ನೇತೃತ್ವದ ಜಿಂಬಾಬ್ವೆ ತಂಡದ ಸ್ಥಿತಿ, ಭಾರತಕ್ಕಿಂತಲೂ ಕಠಿಣವಾಗಿದೆ. ಈ ತಂಡವು, ಎಂಟರ ಘಟ್ಟದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿರುವ ಕಾರಣ, ಗುಂಪಿನಲ್ಲಿರುವ ಉಳಿದ ಮೂರು ತಂಡಗಳಿಗಿಂತ ಕಳಪೆ 'ರನ್‌ ರೇಟ್‌' ಹೊಂದಿದೆ. ಹೀಗಾಗಿ, ಉಳಿದೆರಡೂ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲುವ ಸವಾಲು ಇದೆ.

ಇಂದಿನ ಪಂದ್ಯದಲ್ಲಿ ಭಾರತವನ್ನು ಮಣಿಸಿ, ಮಾರ್ಚ್‌ 1ರಂದು ನಡೆಯುವ ಪಂದ್ಯದಲ್ಲಿ ಹರಿಣಗಳನ್ನೂ ಸೋಲಿಸಿ, ಸೆಮಿ ತಲುಪುವುದು ಜಿಂಬಾಬ್ವೆ ಉದ್ದೇಶ. ಅದು ಅಷ್ಟು ಸುಲಭದ ಮಾತಲ್ಲ. ಆದರೆ, ಲೀಗ್‌ ಹಂತದಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳನ್ನೇ ಮಣಿಸಿ ಪರಾಕ್ರಮ ಮೆರೆದಿರುವುದರಿಂದ ಅಸಾಧ್ಯವಂತೂ ಅಲ್ಲ.

ಜಿಂಬಾಬ್ವೆ ಕನಸು ಇಷ್ಟಕ್ಕೇ ಸಾಕಾರಗೊಳ್ಳುವುದಿಲ್ಲ. ಇತರ ಪಂದ್ಯಗಳ ಫಲಿತಾಂಶವೂ ಮುಖ್ಯವಾಗುತ್ತದೆ. ತನ್ನ ಪಾಲಿನ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ, ಭಾರತ vs ವೆಸ್ಟ್‌ ಇಂಡೀಸ್‌ ಪಂದ್ಯದ ಫಲಿತಾಂಶವು ರಝಾ ಬಳಗದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ. ಆ ಪಂದ್ಯದಲ್ಲಿ ವಿಂಡೀಸ್‌ ಜಯ ಸಾಧಿಸಿದರೆ, ಜಿಂಬಾಬ್ವೆಗೆ ಸೆಮಿಫೈನಲ್‌ ಬಾಗಿಲು ಬಂದ್‌ ಆಗಲಿದೆ.

ಒಂದು ವೇಳೆ ಈ ಸುತ್ತಿನ ಉಳಿದ ಪಂದ್ಯಗಳಲ್ಲಿ, ಆಫ್ರಿಕಾ ಹಾಗೂ ಭಾರತ ತಂಡಗಳು ಜಿಂಬಾಬ್ವೆಗೆ ಮಣಿದು, ವಿಂಡೀಸ್‌ ಪಡೆ ಭಾರತದ ವಿರುದ್ಧ ಗೆದ್ದರೆ, ಸೆಮಿಫೈನಲ್‌ ಟಿಕೆಟ್‌ ಯಾರಿಗೆ ಎಂಬುದನ್ನು 'ರನ್‌ ರೇಟ್' ನಿರ್ಧರಿಸಲಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ, ಹೀಗಾಗುವುದು ಅನುಮಾನ.

ʼಎʼ ಗುಂಪಿನ ಉಳಿದ ಪಂದ್ಯಗಳು

  • ಫೆಬ್ರುವರಿ 26: ಭಾರತ vs ಜಿಂಬಾಬ್ವೆ

  • ಮಾರ್ಚ್‌ 1: ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ

  • ಮಾರ್ಚ್‌ 1: ಭಾರತ vs ವೆಸ್ಟ್‌ ಇಂಡೀಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.