
ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಿಡಗಳ ಆರೈಕೆ
ಗೆಟ್ಟಿ ಚಿತ್ರ
ಮನೆಗೆ ಒಂದು ಗಿಡ ತರುವುದು ಎಂದರೆ ಮಗುವನ್ನು ತಂದು ಆರೈಕೆ ಮಾಡಿದಂತೆ. ಅದಕ್ಕೇನು ಬೇಕು, ಏನು ಬೇಡ, ಏನು ಬದಲಾವಣೆಯಾಯಿತು ಎನ್ನುವುದನ್ನು ಗಮನಿಸಿ ಅಗತ್ಯವಿರುವುದನ್ನು ನೀಡುತ್ತಾ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವುದೇ ಆನಂದ. ಅದರಲ್ಲೂ ಮನೆಯ ಒಳಾಂಗಣವನ್ನು ಸುಂದರಗೊಳಿಸುವ ಶಕ್ತಿ ಗಿಡಗಳಿಗಿರುತ್ತದೆ.
ಪುಟ್ಟ ಹಸಿರು ಗಿಡಗಳು ಮನೆಯೊಳಗೆ ನಳನಳಿಸುತ್ತಿದ್ದರೆ ಮನೆಯೂ ಚೆಂದ, ಮನಸ್ಸಿಗೂ ಆಹ್ಲಾದ. ಆದರೆ ಒಳಾಂಗಣ ಗಿಡಗಳನ್ನು ಪುಟ್ಟ ಮಗುವನ್ನು ಆರೈಕೆ ಮಾಡಿದಂತೆ ಪೋಷಿಸುವ ಅಗತ್ಯವಿರುತ್ತದೆ. ಸಮಯಕ್ಕೆ ಸರಿಯಾಗಿ ಅದಕ್ಕೇನು ಬೇಕು ಎನ್ನುವುದನ್ನು ಆಗಾಗ ಗಮನಿಸುವುದು ಮುಖ್ಯ. ಇಲ್ಲವಾದರೆ ಕೊಳೆತುಹೋಗಬಹುದು, ಅಥವಾ ಬಾಡಿ ಬಸವಳಿದು ಸತ್ತು ಹೋಗಬಹುದು. ಹಾಗಾದರೆ ಒಳಾಂಗಣ ಗಿಡಗಳನ್ನು ಹೇಗೆ ಅರೈಕೆ ಮಾಡಬೇಕು ಎನ್ನುವ ಬಗ್ಗೆ ಕೆಲವು ಸಲಹೆ ಇಲ್ಲಿದೆ.
ಒಳಾಂಗಣ ಗಿಡಗಳೆಲ್ಲವೂ ಹೊರಾಂಗಣದಲ್ಲಿ ಬೆಳೆಯುವ ಗಿಡಗಳಂತಲ್ಲ. ಹೀಗಾಗಿ ಎಚ್ಚರಿಕೆಯಿಂದ ನೀರನ್ನು ಹಾಕಬೇಕು. ತುಸು ಹೆಚ್ಚಾದರೂ ಗಿಡಗಳು ಬುಡದಿಂದ ಕೊಳೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಬೆರಳಿನಿಂದ ಮೇಲಿನ 2 ಇಂಚು ಮಣ್ಣನ್ನು ಪರಿಶೀಲಿಸಿ, ಅದು ಒಣಗಿದಂತೆ ಕಂಡುಬಂದರೆ, ನೀರು ಹಾಕುವ ಸಮಯ ಎನ್ನುವುದನ್ನು ಅರಿತುಕೊಳ್ಳಿ.
ಸೂರ್ಯನ ಬೆಳಕು ಸಸ್ಯಗಳಿಗೆ ಆಹಾರ. ಆದರೆ ಎಲ್ಲಾ ಸಸ್ಯಗಳಿಗೆ ಸೂರ್ಯನ ನೇರ ಬೆಳಕು ಅಗತ್ಯವಿರುವುದಿಲ್ಲ.
ನೀವು ತಂದ ಗಿಡವು ಬೆಳಕಿನ ಕಡೆಗೆ ವಾಲಲು ಪ್ರಾರಂಭಿಸಿದರೆ ಅಥವಾ ಅದರ ಎಲೆಗಳು ಬಾಡಿದಂತೆ ಕಂಡುಬಂದರೆ, ಅದು ಹೆಚ್ಚು ಬಿಸಿಲನ್ನು ಕೇಳುತ್ತಿರಬಹುದು. ಗಿಡ ಎಲ್ಲಾ ಕಡೆಗಳಲ್ಲಿ ಸಮವಾಗಿ ಬೆಳೆಯಲು ಪಾಟ್ಗಳ ಜಾಗ ಬದಲಾಯಿಸುತ್ತಿರಿ.
ಕೆಲವೊಮ್ಮೆ ಹೊಸ ಚಿಗುರು ಬೆಳೆದಂತೆ ಗಿಡದ ಬುಡದ ಎಲೆಗಳು ಒಣಗಲು ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳನ್ನು ಕತ್ತರಿಸಿ. ಇದರಿಂದ ಆರೋಗ್ಯಕರವಾಗಿ ಗಿಡಗಳು ಬೆಳೆಯುತ್ತವೆ. ಅಲ್ಲದೆ ರೋಗಗಳು ಬಾರದಂತೆ ಗಿಡಗಳನ್ನು ಕಾಪಾಡಿಕೊಳ್ಳಬಹುದು.
ಗಿಡಗಳಿಗೆ ನೀರು ಮತ್ತು ಸೂರ್ಯನ ಬೆಳಕು ಮಾತ್ರವಲ್ಲ, ಸರಿಯಾದ ಪೋಷಕಾಂಶಗಳು ಸಹ ಬೇಕು. ಹೀಗಾಗಿ ಬೆಳವಣಿಗೆಯ ಋತುವಿನಲ್ಲಿ ಅಂದರೆ ವಸಂತ ಕಾಲದಲ್ಲಿ ಮತ್ತು ಬೇಸಿಗೆ ಸಮಯದಲ್ಲಿ ಪ್ರತಿ 4–6 ವಾರಗಳಿಗೊಮ್ಮೆ ಗಿಡಗಳಿಗೆ ಗೊಬ್ಬರ ಹಾಕುವುದರಿಂದ ಹೊಸ ಎಲೆಗಳು ಚಿಗುರುವಂತೆ, ಹೂವುಗಳು ಬಿಡುವಂತೆ ಮಾಡಬಹುದು.
ಗಿಡದ ಬುಡದಲ್ಲಿ ಮಣ್ಣಿನ ಮೇಲೆ ಬಿಳಿ ಕಲ್ಲುಗಳನ್ನು ಇಡುವುದರಿಂದ ಪಾಟ್ನ ಅಂದವೂ ಹೆಚ್ಚುತ್ತದೆ. ಜತೆಗೆ ಗಿಡಗಳ ಆರೋಗ್ಯಕ್ಕೂ ಒಳ್ಳೆಯದು. ಉದಾಹರಣೆಗೆ ಜರಿಗಿಡಗಳನ್ನು ಹವಾನಿಯಂತ್ರಣ ಇರುವಲ್ಲಿ ಅಥವಾ ಬಿಸಿಯಾದ ಕೋಣೆಗಳಲ್ಲಿ ಇಟ್ಟಾಗ ಎಲೆಗಳು ಒಣಗಬಹುದು. ಬಿಳಿ ಕಲ್ಲುಗಳು ಗಿಡಕ್ಕೆ ತೇವಾಂಶ ಒದಗಿಸಿ ಗಿಡ ಒಣಗದಂತೆ ತಡೆಯುತ್ತದೆ. ಅಲ್ಲದೆ ಆಗಾಗ ಸ್ಪಿಂಕ್ಲರ್ಗಳ ಮೂಲಕ ನೀರನ್ನು ಸಿಂಪಡಿಸುತ್ತಿದ್ದರೆ ಒಳ್ಳೆಯದು.
ಗಿಡಗಳ ಬೆಳವಣಿಗೆ ಉತ್ತಮವಾಗಿದ್ದಾಗ ನಾವಿಟ್ಟ ಪಾಟ್ ಅಥವಾ ಕುಂಡಗಳಿಗೂ ಮೀರಿ ಬೆಳೆಯುತ್ತವೆ. ಆಗ ಅಂದವೂ ಹಾಳಾಗುತ್ತದೆ, ಜತೆಗೆ ಗಿಡದ ಆರೋಗ್ಯಕ್ಕೂ ಒಳ್ಳೆಯದಲ್ಲ. ಹೀಗಾಗಿ ಆಗಾಗ ಪಾಟ್ಗಳನ್ನು ಬದಲಾಯಿಸುತ್ತಿರಿ. ಈ ಮೂಲಕ ಪೋಷಕಾಂಶಗಳನ್ನು ನೀಡಲು ಮಣ್ಣನ್ನು ಹೊಸದಾಗಿ ಹಾಕಬಹುದು. ಪಾಟ್ಗಳನ್ನು ಬದಲಾಯಿಸುವ ಸಂದರ್ಭದಲ್ಲಿ ಒಂದೆರಡು ಇಂಚು ದೊಡ್ಡ ಕುಂಡಕ್ಕೇ ಹಾಕಿ. ಜತೆಗೆ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನ್ನು ಸೇರಿಸಿ. ಇದರಿಂದಾಗಿ ಬೇರುಗಳಿಗೆ ಉಸಿರಾಡಲು ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ ಮತ್ತು ಗಿಡಗಳೂ ಆರೋಗ್ಯಕರವಾಗಿ ಬೆಳೆಯುತ್ತವೆ.
ಧೂಳು ಗಿಡಗಳ ಹೊಳಪನ್ನು ಕೆಡಿಸಬಹುದು. ಜತೆಗೆ ಇದು ದ್ಯುತಿಸಂಶ್ಲೇಷಣಾ ಕ್ರಿಯೆಗೆ ಬೇಕಾಗುವ ಸೂರ್ಯನ ಬೆಳಕನ್ನು ತಡೆಯುತ್ತದೆ
ಆದ್ದರಿಂದ, ಪ್ರತಿ ಎರಡು ವಾರಗಳಿಗೊಮ್ಮೆ, ನಿಮ್ಮ ಗಿಡಗಳ ಎಲೆಗಳನ್ನು ಮೃದುವಾದ, ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಇದರಿಂದ ಅವುಗಳಿಗೆ ಉಸಿರಾಡಲು ಸುಲಭವಾಗುತ್ತದೆ. ಸ್ವಚ್ಛವಾದ ಎಲೆಗಳು ಕೀಟಗಳಿಂದ ಮುಕ್ತವಾಗಿರಲು ಮತ್ತು ನಿಮ್ಮ ಶೆಲ್ಫ್ ಅಥವಾ ಕಿಟಕಿಗಳು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.