ಕಾರವಾರ: ಅತೃಪ್ತರ ಬಣದಲ್ಲಿರುವ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಡಿದ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಫೇಸ್ಬುಕ್ನಲ್ಲೇ ಪ್ರತಿಕ್ರಿಯಿಸಿದ್ದಾರೆ.
‘ಹೆಬ್ಬಾರ ಅವರ ವೈಯಕ್ತಿಕ ನಿರ್ಧಾರಗಳಿಗೆ ಹಾಗೂ ಬಯಕೆಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಬೇರೆಯವರನ್ನು ದೂರವುದು ಸರಿಯಲ್ಲ’ ಎಂದು ದೇಶಪಾಂಡೆ ಬರೆದಿದ್ದಾರೆ.
ಇದನ್ನೂ ಓದಿ...ಮತದಾರರ ಕ್ಷಮೆ ಕೇಳಿದ ಶಾಸಕ ಶಿವರಾಮ ಹೆಬ್ಬಾರ
‘ಜನಪ್ರತಿನಿಧಿಯಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಭಾಗದ ಅಭಿವೃದ್ಧಿಗೆ ನಾನು ನನ್ನ ಗರಿಷ್ಠ ಅಥವಾ ಅದಕ್ಕೂ ಮೀರಿದ ಶ್ರಮ ವಹಿಸಿದ್ದೇನೆ. ನಮ್ಮ ಸುತ್ತಲೂ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ಕಾಣುವಂತಿವೆ. ಅದನ್ನು ಹೆಬ್ಬಾರಅವರೂ ಹಲವು ಬಾರಿ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ, ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಅತೃಪ್ತರ ಬಣದೊಂದಿಗೆ ಇರುವ ಶಿವರಾಮ ಹೆಬ್ಬಾರ,‘ಈ ಮೈತ್ರಿ ಸರ್ಕಾರದಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ ನನ್ನ ಕ್ಷೇತ್ರಕ್ಕೆ ಯಾವ ಯೋಜನೆಗಳನ್ನೂ ತರುವಲ್ಲಿ ಯಶಸ್ಸು ಕಾಣಲಿಲ್ಲ. ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಂತೂ ಜಿಲ್ಲೆಯಿಂದ ಆರಿಸಿಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ’ ಎಂದು ಫೇಸ್ಬುಕ್ನಲ್ಲಿ ಆರೋಪಿಸಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.