ರಜತ್ ಪಾಟೀದಾರ್ ಮತ್ತು ಅಜಿಂಕ್ಯ ರಹಾನೆ
ಚಿತ್ರ: X / @IPL
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯಕ್ಕೆ ಕೋಲ್ಕತ್ತದ ಈಡನ್ಗಾರ್ಡನ್ಸ್ನಲ್ಲಿ ವೇದಿಕೆ ಸಜ್ಜಾಗಿದ್ದು, ಆತಿಥೇಯ ಕೋಲ್ಕತ್ತ ನೈಟ್ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ಕೆಕೆಆರ್, ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಪಂದ್ಯದಿಂದಲೇ ಅತ್ಯುತ್ತಮ ಆಟವಾಡುವ ಛಲದಲ್ಲಿದೆ. ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್ಸಿಬಿ, ಚಾಂಪಿಯನ್ನರಿಗೆ ಮನೆಯಂಗಳದಲ್ಲೇ ಸೋಲುಣಿಸುವ ಲೆಕ್ಕಾಚಾರದಲ್ಲಿದೆ.
ಎರಡೂ ತಂಡಗಳನ್ನು ಹೊಸ ನಾಯಕರು ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಶ್ರೇಯಸ್ ಅಯ್ಯರ್ (ಕೆಕೆಆರ್) ಮತ್ತು ಫಾಫ್ ಡು ಪ್ಲೆಸಿ (ಆರ್ಸಿಬಿ) ಅವರನ್ನು 2024ರ ಮೆಗಾ ಹರಾಜಿಗೂ ಮುನ್ನ ಕೈಬಿಟ್ಟಿದ್ದ ಈ ತಂಡಗಳು ಕ್ರಮವಾಗಿ ಅಜಿಂಕ್ಯ ರಹಾನೆ ಮತ್ತು ರಜತ್ ಪಟೀದಾರ್ಗೆ ಹೊಣೆ ನೀಡಿವೆ.
ಈ ಪಂದ್ಯದಲ್ಲಿ ಗಮನ ಸೆಳೆಯಬಹುದಾದ ಐವರು ಬೌಲರ್ಗಳು ಇವರೇ.
ಕೋಲ್ಕತ್ತದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ವರುಣ್ ಚಕ್ರವರ್ತಿ ಅಪಾಯಕಾರಿಯಾಗಬಲ್ಲರು. ಮಿಸ್ಟರಿ ಸ್ಪಿನ್ನರ್ ಎಂದೇ ಖ್ಯಾತವಾಗಿರುವ ವರುಣ್, ಆತಿಥೇಯ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 11.13 ದರದಲ್ಲಿ 31 ವಿಕೆಟ್ಗಳನ್ನು ಕಬಳಿಸಿರುವ ವರುಣ್, ಐಪಿಎಲ್ನ 2023 ಹಾಗೂ 2024ರ ಆವೃತ್ತಿಗಳಲ್ಲಿ 28 ಇನಿಂಗ್ಸ್ಗಳಿಂದ 41 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ, ವಿಶ್ವಾಸ ಅಲೆಯಲ್ಲಿ ತೇಲುತ್ತಿರುವ ಅವರು, ಆರ್ಸಿಬಿಗೆ ಕಾಟ ನೀಡಲು ಸಜ್ಜಾಗಿದ್ದಾರೆ.
ಐಪಿಎಲ್ನಲ್ಲಿ ಕಡಿಮೆ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟ ವೇಗಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಭುವನೇಶ್ವರ್ ಕುಮಾರ್ ಅವರದ್ದು. ಈ ಆವೃತ್ತಿಯಲ್ಲಿ ಆರ್ಸಿಬಿ ಬೌಲಿಂಗ್ನ ಪ್ರಮುಖ ಅಸ್ತ್ರವಾಗಿರುವ ಭುವಿ, ಸ್ವಿಂಗ್, ಸ್ಲೋವರ್, ಯಾರ್ಕರ್ ಮತ್ತು ಕರಾರುವಕ್ ಎಸೆತಗಳ ಮೂಲಕ ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ನಲ್ಲಿ ಈವರೆಗೆ 176 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಇವರು, 7.56ರ ದರದಲ್ಲಿ ರನ್ ಬಿಟ್ಟುಕೊಟ್ಟು 181 ವಿಕೆಟ್ಗಳನ್ನು ಪಡೆದಿದ್ದಾರೆ.
ಕೆಕೆಆರ್ ಪರ ಅತಿಹೆಚ್ಚು ವಿಕೆಟ್ ಉರುಳಿಸಿದ ಆಟಗಾರ ಎನಿಸಿರುವ ಸುನಿಲ್ ನಾರಾಯಣ್, ಇಂದಿನ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. ವರುಣ್ ಚಕ್ರವರ್ತಿಯಂತೆಯೇ ಮಿಸ್ಟರಿ ಬೌಲರ್ ಆಗಿರುವ ಸುನಿಲ್, ಆರ್ಸಿಬಿಯ ಬ್ಯಾಟಿಂಗ್ ಬಲಕ್ಕೆ ಸವಾಲಾಗಬಲ್ಲರು. ಪವರ್ ಪ್ಲೇ ಸೇರಿದಂತೆ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡುವ ಸಾಮರ್ಥಯ ನಾರಾಯಣ್ಗೆ ಇದೆ. 2012ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್ನಲ್ಲೇ ಇರುವ ಈ ಆಟಗಾರ, 175 ಇನಿಂಗ್ಸ್ಗಳಲ್ಲಿ 180 ವಿಕೆಟ್ಗಳನ್ನು ಪಡೆದಿದ್ದಾರೆ. ಕೇವಲ 6.73ರ ದರದಲ್ಲಿ ರನ್ ಬಿಟ್ಟುಕೊಟ್ಟಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.
ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಬಲ್ಲ ಮತ್ತೊಬ್ಬ ಆಟಗಾರ ಜೋಶ್ ಹ್ಯಾಜಲ್ವುಡ್. ಬಲಗೈ ವೇಗಿಯಾಗಿರುವ ಜೋಶ್, ವೇಗ, ಸ್ವಿಂಗ್ ಹಾಗೂ ಯಾರ್ಕರ್ಗಳನ್ನು ಪ್ರಯೋಗಿಸಬಲ್ಲ ಆಟಗಾರ. ಭುವನೇಶ್ವರ್ ಕುಮಾರ್ ಜೊತೆಗೂಡಿ ವೇಗದ ಬೌಲಿಂಗ್ಗೆ ಬಲದ ತುಂಬಲು ಸಜ್ಜಾಗಿದ್ದಾರೆ. ಐಪಿಎಲ್ನಲ್ಲಿ ಇದುವೆಗೆ 27 ಪಂದ್ಯ ಆಡಿರುವ ಜೋಶ್, 8.06ರ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದು 35 ವಿಕೆಟ್ಗಳನ್ನು ಪಡೆದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 19 ವಿಕೆಟ್ಗಳನ್ನು ಉರುಳಿಸಿದ್ದ ಹರ್ಷಿತ್ ರಾಣಾ, ಕೆಕೆಆರ್ನಲ್ಲಿರುವ ಪ್ರಮುಖ ಬೌಲರ್. ವೇಗದ ಜೊತೆಗೆ ನಿಧಾನಗತಿ ಎಸೆತಗಳನ್ನು ಪ್ರಯೋಗಿಸಬಲ್ಲ ಹರ್ಷಿತ್, ಯಾವುದೇ ಪರಿಸ್ಥಿತಿಯಲ್ಲೂ ವಿಕೆಟ್ ತಂದುಕೊಡಬಲ್ಲ ಆಟಗಾರ. ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ರಾಣಾ ಪಾತ್ರವೂ ದೊಡ್ಡದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.