ಅಮರಾವತಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ಗಳನ್ನು ಮಾಡಿರುವ ನಾಯ್ಡು, ‘₹ 59 ಸಾವಿರ ಕೋಟಿ ಮೊತ್ತದ ಬೃಹತ್ ಮೊತ್ತದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿದ್ದಾರೆ. ದೇಶದ ರಕ್ಷಣಾ ಕ್ಷೇತ್ರದ ಬಹುದೊಡ್ಡ ಹಗರಣ ಎನ್ನಬಹುದಾದ ಪ್ರಕರಣದಲ್ಲಿ ಪ್ರಧಾನಮಂತ್ರಿ ಕಚೇರಿಯ ಪಾತ್ರದ ಸಾಧ್ಯತೆಯ ಬಗ್ಗೆ ಹಾಗೂ ಬಿಜೆಪಿಯ ವಿನಾಶಕಾರಿ ನಿರ್ಧಾರಗಳ ಕುರಿತು ವರದಿಗಳು ಪ್ರಕಟವಾಗಿವೆ’ ಎಂದು ಕಿಡಿಕಾರಿದ್ದಾರೆ. ಜೊತೆಗೆ ‘ಮೋದಿ ಜೀ ನೀವು ದೇಶಕ್ಕೆ ಮೋಸ ಮಾಡುತ್ತಿರುವಾಗ ಹೆಚ್ಚುಕಾಲ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಟ್ವೀಟಿಸಿದ್ದಾರೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ನೀಡಿರುವ ಹೇಳಿಕೆಯನ್ನೂ ಉಲ್ಲೇಖಿಸಿರುವ ನಾಯ್ಡು, ‘ರಕ್ಷಣಾ ಸಚಿವಾಲಯವು ಒಪ್ಪಂದವನ್ನು ಅಂತಿಮಗೊಳಿಸುವಾಗ ‘ಸಮಾನಾಂತರ ಸಮಾಲೋಚನೆ’ ಹೆಸರಿನಲ್ಲಿ ಹಸ್ತಕ್ಷೇಪ ಮಾಡಿರುವ ಪ್ರಧಾನಮಂತ್ರಿ ಕಚೇರಿಯು,ಭಾರತೀಯ ಸಂಧಾನ ಸಮಿತಿಯ ಸ್ಥಾನವನ್ನು ದುರ್ಬಲಗೊಳಿಸಿದೆ. ಇಂತಹ ಬೆಳವಣಿಗೆಯು ಆಘಾತಕಾರಿ. ಇದು ಬಿಜೆಪಿ ಸರ್ಕಾರದೊಳಗಿನ ಸಮಗ್ರತೆ ಕೊರತೆಯನ್ನು ಸೂಚಿಸುತ್ತದೆ’ ಎಂದು ಕಿಡಿಕಾರಿದ್ದಾರೆ.
‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆದ ಇತ್ತೀಚಿನ ಎಲ್ಲ ಬೆಳವಣಿಗೆಗಳು ಒಪ್ಪಂದದ ಮೇಲಿನ ಅನುಮಾನಗಳನ್ನೂ ಗಟ್ಟಿಗೊಳಿಸಿವೆ. ಸತ್ಯ ಹೊರಬರಬೇಕಾದರೆ ಸ್ವತಂತ್ರವಾಗಿ ತನಿಖೆಯ ಅಗತ್ಯವಿದೆ.ಈ ಬಾರಿ ಬಿಜೆಪಿ ಸರ್ಕಾರವು ತನ್ನ ಅನುಕೂಲಕ್ಕಾಗಿ ಬುದ್ದಿವಂತಿಕೆಯಿಂದ ನೈಜ ಮಾಹಿತಿಯನ್ನು ದೂರವಿಡಲು ಸಾಧ್ಯವಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ಕೆಣಕಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಸಂದರ್ಭದಲ್ಲಿ ಫ್ರಾನ್ಸ್ ಜತೆಗೆ ಪ್ರಧಾನಿ ಕಾರ್ಯಾಲಯವು (ಪಿಎಂಒ) ನೇರವಾಗಿ ಮಾತುಕತೆ ನಡೆಸಿದ್ದಕ್ಕೆ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ‘ದ ಹಿಂದೂ’ ಪತ್ರಿಕೆ ಮಾಡಿದ ವರದಿಯು ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಳು
ಶೇಖರ್ ಗುಪ್ತ ಅಂಕಣ ಬರಹಗಳು
ಸುದೀರ್ಘ ಕಥನ
ಇತರ ಸುದ್ದಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.