
ಪಿ ಚಿದಂಬರಂ
ಪಿಟಿಐ
ನವದೆಹಲಿ: ‘ನರೇಗಾ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಮಸೂದೆ’ಯಲ್ಲಿ (ವಿಬಿ–ಜಿ ರಾಮ್ ಜಿ) ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ‘ನರೇಗಾದಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿಗರು ಎರಡನೇ ಬಾರಿಗೆ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.
‘ನನ್ನ ಪ್ರಕಾರ, ಇದು ಮಹಾತ್ಮ ಗಾಂಧಿಯವರ ಎರಡನೇ ಹತ್ಯೆಯಾಗಿದೆ. 1948ರ ಜನವರಿ 30ರಂದು ಅವರನ್ನು ಮೊದಲ ಬಾರಿ ಕೊಲ್ಲಲಾಗಿತ್ತು. ಇದೀಗ ಬಿಜೆಪಿಗರು ಅವರನ್ನು ಮತ್ತೊಮ್ಮೆ ಕೊಂದಿದ್ದಾರೆ ಎಂದರೆ ತಪ್ಪಲ್ಲ’ ಎಂದು ಅವರು ಕಿಡಿಕಾರಿದ್ದಾರೆ.
‘ಹೊಸ ವಿಬಿ–ಜಿ ರಾಮ್ ಜಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಹಾಗೆಯೇ ನರೇಗಾ ಯೋಜನೆಯನ್ನು ಪುನಃಸ್ಥಾಪಿಸುವವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ. ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆ, ಎಲ್ಲ ಹಳ್ಳಿಗಳಿಗೂ ತೆರಳಿ ಬಿಜೆಪಿಗರ ವಂಚನೆಯನ್ನು ಬಹಿರಂಗಪಡಿಸಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
‘ನೀವು (ಬಿಜೆಪಿಗರು) ಗಾಂಧಿ ಮತ್ತು ನೆಹರೂ ಅವರನ್ನು ಅಧಿಕೃತ ದಾಖಲೆಗಳಿಂದ ಅಳಿಸಿ ಹಾಕಲು ಪ್ರಯತ್ನಿಸಬಹುದು. ಆದರೆ, ಅವರು ಬುದ್ಧ ಅಥವಾ ಯೇಸುವಿನಂತೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿರುತ್ತಾರೆ. ಯಾವುದೇ ಸರ್ಕಾರಿ ಆದೇಶವು ಗಾಂಧಿ ಮತ್ತು ನೆಹರೂ ಹೆಸರನ್ನು ಜನರ ಮನಸ್ಸಿನಿಂದ ದೂರ ಮಾಡಲ್ಲ ಸಾಧ್ಯವಿಲ್ಲ’ ಎಂದಿದ್ದಾರೆ.
ಹೊಸ ಯೋಜನೆಗಳ ಶೀರ್ಷಿಕೆಗಳಿಗೆ ಇಂಗ್ಲಿಷ್ ಅಕ್ಷರಗಳಲ್ಲಿ ಬರೆದ ಹಿಂದಿ ಪದಗಳು ಎಂದು ಕರೆಯುವ ಸರ್ಕಾರದ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ. ‘ವಿಬಿ–ಜಿ ರಾಮ್ ಜಿ’ನಂತಹ ಹೆಸರುಗಳು ಗ್ರಾಮೀಣ ದಕ್ಷಿಣ ಭಾರತೀಯರಿಗೆ ಗೊಂದಲಮಯ ಮತ್ತು ಅರ್ಥವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
‘ವಿಬಿ–ಜಿ ರಾಮ್ ಜಿ’ ಹೆಸರಿನ ಅರ್ಥವೇನೆಂದು ಸಚಿವರಿಗೂ ತಿಳಿಯದಿರಬಹುದು. ರಾಜ್ಯಗಳು ಈ ನಿಖರವಾದ ಹೆಸರನ್ನು ಬಳಸದ ಹೊರತು, ಪರಿಹಾರ ಸಿಗುವುದಿಲ್ಲ ಎಂದು ಅವರು ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.