ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟೀದಾರ್
ಚಿತ್ರಕೃಪೆ: X / @PunjabKingsIPL
ಅಹಮದಾಬಾದ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ನಾಳೆ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 'ಚೊಚ್ಚಲ' ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಪಂದ್ಯಕ್ಕೆ ಮಳೆಯಿಂದಾಗಿ ಅಡ್ಡಿಯಾಗುವ ಸಾಧ್ಯತೆ ಇದೆ. ಇದೇ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಕ್ವಾಲಿಫೈಯರ್–2 (ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್) ಪಂದ್ಯ ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭವಾಗಿತ್ತು.
ಸಾಮಾನ್ಯವಾಗಿ ಪ್ರಮುಖ ಟೂರ್ನಿಗಳ ನಾಕೌಟ್ ಪಂದ್ಯಗಳಿಗೆ ಮೀಸಲು ದಿನ ನಿಗದಿಯಾಗಿರುತ್ತದೆ. ಆದರೆ, ಭಾರತ–ಪಾಕಿಸ್ತಾನ ಸಂಘರ್ಷದ ಕಾರಣ ಟೂರ್ನಿಯು ಈಗಾಗಲೇ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾರಣ, ಪ್ಲೇಆಫ್ ಪಂದ್ಯಗಳಿಗೆ ಮೀಸಲು ದಿನ ನಿಗದಿಯಾಗಿರಲಿಲ್ಲ.
ಒಂದು ವೇಳೆ ಕ್ವಾಲಿಫೈಯರ್–2 ಪಂದ್ಯ ರದ್ದಾಗಿದ್ದರೆ, ಲೀಗ್ ಹಂತದ ಸಾಧನೆ ಆಧಾರದಲ್ಲಿ ಪಂಜಾಬ್ ಫೈನಲ್ಗೇರುತ್ತಿತ್ತು. ಲೀಗ್ ಹಂತದಲ್ಲಿ ಪಂಜಾಬ್ ಅಗ್ರಸ್ಥಾನ ಹಾಗೂ ಮುಂಬೈ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದವು.
ಒಂದುವೇಳೆ ನಾಳೆ ಮಳೆ ಸುರಿದು ಹೆಚ್ಚುವರಿ ಅವಧಿಯಲ್ಲಿಯೂ 'ಫೈನಲ್' ಸಾಧ್ಯವಾಗದಿದ್ದರೆ ಮುಂದೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ನಾಳೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯ ನಡೆಯಲಿದೆ. ಆರ್ಸಿಬಿ ಹಾಗೂ ಪಂಜಾಬ್ ಬುಧವಾರ (ಜೂನ್ 4ರಂದು) ಸೆಣಸಾಟ ನಡೆಸಲಿವೆ. ಮೀಸಲು ದಿನದಂದೂ ಆಟ ನಡೆಯದಿದ್ದರೆ, ಲೀಗ್ ಹಂತದಲ್ಲಿ ಹೆಚ್ಚು ಅಂಕ ಗಳಿಸಿದ್ದ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಲಿದೆ. ಅದರಂತೆ, ಪಂಜಾಬ್ ಕಿಂಗ್ಸ್ ಚೊಚ್ಚಲ ಟ್ರೋಫಿಗೆ ಮುತ್ತಿಡಲಿದ್ದು, ಆರ್ಸಿಬಿ ರನ್ನರ್ಸ್ಅಪ್ ಆಗಬೇಕಾಗುತ್ತದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.