ADVERTISEMENT

ಕಾಶ್ಮೀರ ಪರ ಶಾಹೀದ್ ಆಫ್ರಿದಿ ಟ್ವೀಟ್‌, ಗೌತಮ್ ಗಂಭೀರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:23 IST
Last Updated 7 ಆಗಸ್ಟ್ 2019, 5:23 IST
   

ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತದ ನಿಲುವನ್ನು ಪರೋಕ್ಷವಾಗಿ ಟೀಕಿಸಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಆಫ್ರಿದಿಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರತದ ಮಾಜಿ ಕ್ರಿಕೆಟಿಗ, ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವಿಟರ್ ಮೂಲಕವೇ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

‘ವಿಶ್ವಸಂಸ್ಥೆಯ ನಿರ್ಣಯದಂತೆಯೇ ಕಾಶ್ಮೀರದವರಿಗೆ ಅವರ ಹಕ್ಕುಗಳನ್ನು ಒದಗಿಸಿಕೊಡಬೇಕು. ನಮ್ಮೆಲ್ಲರಂತೆಯೇ ಸ್ವಾತಂತ್ರ್ಯದ ಹಕ್ಕು ನೀಡಬೇಕು. ವಿಶ್ವಸಂಸ್ಥೆಯನ್ನು ರಚಿಸಿದ್ದು ಯಾಕಾಗಿ ಮತ್ತು ಅದು ಯಾಕೆ ನಿದ್ರಿಸುತ್ತಿದೆ? ಕಾಶ್ಮೀರದಲ್ಲಿ ಮಾನವೀಯತೆಯ ವಿರುದ್ಧ ನಡೆಯುತ್ತಿರುವಅಪ್ರಚೋದಿತ ಆಕ್ರಮಣಶೀಲತೆಮತ್ತು ಅಪರಾಧಗಳನ್ನು ಗಮನಿಸಬೇಕು. ಅಮೆರಿಕದ ಅಧ್ಯಕ್ಷರುಮಧ್ಯಸ್ಥಿಕೆ ವಹಿಸಬೇಕು’ ಎಂದು ಆಫ್ರಿದಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ ಗಂಭೀರ್, ‘ಶಾಹಿದ್ ಆಫ್ರಿದಿ ಅವರು ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲಿಅಪ್ರಚೋದಿತ ಆಕ್ರಮಣನಡೆಯುತ್ತಿದೆ.ಮಾನವೀಯತೆಯ ವಿರುದ್ಧ ಅಪರಾಧನಡೆಯುತ್ತಿದೆ. ಈ ಕುರಿತು ಗಮನ ಸೆಳೆದಿರುವುದಕ್ಕೆ ಅವರನ್ನು ಅಭಿನಂದಿಸಬೇಕು. ಆದರೆ, ಇವೆಲ್ಲಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿದೆ ಎಂಬುದನ್ನು ಉಲ್ಲೇಖಿಸಲು ಅವರು ಮರೆತಿದ್ದಾರೆ. ಬೇಸರ ಬೇಡ, ಅದನ್ನೂ ಶೀಘ್ರದಲ್ಲೇ ನಾವು ಸರಿಪಡಿಸುತ್ತೇವೆ!!!’ ಎಂದು ಹೇಳಿದ್ದಾರೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಈ ಹಿಂದೆಯೂ ಹಲವು ಬಾರಿ ಆಫ್ರಿದಿ ಮತ್ತು ಗಂಭೀರ್ ಮಧ್ಯೆ ಟ್ವೀಟ್ ಸಮರ ನಡೆದಿದೆ.ಕಾಶ್ಮೀರದಲ್ಲಿ ಮುಗ್ಧರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ 2018ರ ಏಪ್ರಿಲ್‌ನಲ್ಲಿ ಆಫ್ರಿದಿ ಟ್ವೀಟ್ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಗಂಭೀರ್, ಆಫ್ರಿದಿ ಅವರನ್ನುಅಂಡರ್ ನೈಂಟೀನ್ ಆಟಗಾರಎಂದು ವ್ಯಂಗ್ಯವಾಡಿದ್ದರು. 2018ರ ನವೆಂಬರ್‌ನಲ್ಲಿ ಮತ್ತೆ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದ ಆಫ್ರಿದಿ,ಪಾಕಿಸ್ತಾನವು ತನ್ನ ನಾಲ್ಕು ಪ್ರಾಂತ್ಯಗಳಾದ ಪಂಜಾಬ್‌, ಸಿಂಧ್‌, ಬಲೂಚಿಸ್ತಾನ, ಖೈಬರ್‌ ಪಕ್ತುಂಕ್ವಾ ಪ್ರದೇಶಗಳನ್ನೇ ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ?ಎಂದು ಪ್ರಶ್ನಿಸಿ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.