ADVERTISEMENT

ನಾವು ಅತೃಪ್ತ ಶಾಸಕರಲ್ಲ, ಅಸಹಾಯಕ ಶಾಸಕರು: ಶಿವರಾಮ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 6:00 IST
Last Updated 25 ಜುಲೈ 2019, 6:00 IST
   

ಯಲ್ಲಾಪುರ (ಉತ್ತರ ಕನ್ನಡ): ನಾವು ಅತೃಪ್ತ ಶಾಸಕರಲ್ಲ ಅಸಹಾಯಕ ಶಾಸಕರು. ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಸಹಾಯಕರಾಗಿ ರಾಜೀನಾಮೆ ನೀಡಿದ್ದೇವೆಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಇಂತಹ ದೊಡ್ಡ ನಿರ್ಣಯ ಕೈಗೊಳ್ಳಬೇಕಾದರೆ ಒಂದು ದಿನದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಅನೇಕ ದಿನಗಳಿಂದ ಅಸಹಾಯಕತೆ ಅನುಭವಿಸಿ ಮಿತಿ ಮೀರಿದ ನಂತರ ಈ ನಿರ್ಣಯಕ್ಕೆ ಬಂದಿದ್ದೇವೆ. 20 ಶಾಸಕರ ರಾಜೀನಾಮೆ ಸಣ್ಣ ಸಂಖ್ಯೆಯಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತದೆ ಎಂದಾಗ ಒಟ್ಟಾಗಿ ರಾಜೀನಾಮೆ ನಿರ್ಣಯಕ್ಕೆ ಬಂದಿದ್ದೇವೆ’ ಎಂದರು.

ADVERTISEMENT

‘ನಾವೆಲ್ಲಾ ಒಟ್ಟಾಗಿದ್ದು ನಿರ್ಣಯಕ್ಕೆ ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು ನಮ್ಮಲ್ಲಿ ಎಲ್ಲರೂ ಹಿರಿಯ ಶಾಸಕರೇ ಅಗಿದ್ದಾರೆ. ಮೊದಲ ಬಾರಿ ಯಾರೂ ಶಾಸಕರಾದವರಿಲ್ಲ. ಇವರಲ್ಲಿ ಯಾರೂ ದುಡ್ಡು ನೋಡದವರೇನಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಪಕ್ಷಕ್ಕಲ್ಲ. ಪಕ್ಷದ ಯಾವುದೇ ನಾಯಕರು ನಮ್ಮನ್ನು ಸಂಪರ್ಕಿಸದೇ, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಪಾದಾರ್ಪಣೆ ಮಾಡಬಾರದು ಎಂದು ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಜನತೆಯ ಮೇಲೆ ವಿಶ್ವಾಸವಿದೆ. ಅವರು ಪರಿಸ್ಥಿತಿಯನ್ನು ಅರಿಯುತ್ತಾರೆ ಎಂದರು.

ಬಿಜೆಪಿ ಸೇರ್ಪಡೆಗೊಂಡು ಮಂತ್ರಿಯಾಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾವು ರಾಜೀನಾಮೆ ನೀಡಿದ ಶಾಸಕರು ನಮ್ಮ ಬೆಂಬಲವನ್ನು ಪಡೆದು ಬಿಜೆಪಿ ಏನು ಮಾಡುತ್ತದೆ ಎಂದ ಹೆಬ್ಬಾರ್,ಮೊದಲು ಸ್ಪೀಕರ್ ರಾಜೀನಾಮೆ ಅಂಗೀಕರಿಸಲಿ ನಂತರ ಒಟ್ಟಾಗಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ. ಇದುವರೆಗೂ ನಾವಿನ್ನೂ ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ. ಯಾವುದೇ ಪಕ್ಷದ ನಾಯಕರನ್ನೂ ಸಂಪರ್ಕಿಸಿಲ್ಲ. ಸ್ಪೀಕರ್ ಮುಂದೆ ಎರಡು ಪ್ರಶ್ನೆಗಳಿವೆ ಒಂದು ರಾಜೀನಾಮೆ, ಇನ್ನೊಂದು ಅನರ್ಹತೆ. ಅನರ್ಹರಾಗುವ ಸ್ಥಿತಿಯಲ್ಲಿ ನಾವಿಲ್ಲ. ಇನ್ನು ರಾಜೀನಾಮೆ ಅಂಗಿಕಾರವಾಗಲೇ ಬೇಕು. ನಂತರದಲ್ಲಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ’ಎಂದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.